Mysore
21
clear sky

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಓದುಗರ ಪತ್ರ: ಭ್ರೂಣಹತ್ಯೆ: ಕಠಿಣ ಶಿಕ್ಷೆಯಾಗಲಿ

ಓದುಗರ ಪತ್ರ

ಮೈಸೂರಿನಲ್ಲಿ ಭ್ರೂಣ ಹತ್ಯೆ ಪ್ರಕರಣ ವರದಿಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೇ ಭಾಗಿಯಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ದುಷ್ಕೃತ್ಯವೆಸಗುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

ಭ್ರೂಣ ಹತ್ಯೆಯಿಂದಾಗಿ ರಾಜ್ಯದ ಸುಮಾರು ೧೪ ಜಿಲ್ಲೆಗಳಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳ ಅನುಪಾತದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿದೆ. ಬಾಗಲಕೋಟೆ, ಬಿಜಾಪುರ, ವಿಜಯ ಪುರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ, ೧೦೦೦ ಗಂಡು ಮಕ್ಕಳಿಗೆ ಕೇವಲ ೬೨೪ ರಿಂದ ೭೫೦ ಹೆಣ್ಣು ಮಕ್ಕಳಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಾಗುತ್ತದೆ.

ಈಗಾಗಲೇ ದಾಖಲಾಗಿರುವ ಇಂತಹ ಪ್ರಕರಣಗಳಲ್ಲಿ ಸರ್ಕಾರ ಯಾವ ಕಾನೂನು ಕ್ರಮ ಕೈಗೊಂಡಿದೆ , ಯಾರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು. ಭ್ರೂಣಹತ್ಯೆ ನಿಷೇಧ ಕಾನೂನಿನ ಪ್ರಕಾರ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆ ಮಾಡುವವರಿಗೆ, ಮೂರರಿಂದ ಐದು ವರ್ಷಗಳ ಕಾಲ ಜೈಲು ಶಿಕ್ಷೆ, ೧೦ರಿಂದ ೫೦ ಸಾವಿರ ರೂ. ವರೆಗೆ ದಂಡ, ಮತ್ತು ಅವರ ವೈದ್ಯಕೀಯ ಪರವಾನಗಿಯನ್ನು ರದ್ದು ಪಡಿಸಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.

ಆದರೆ ಈ ಕಾನೂನು ಜಾರಿಗೆ ಬಂದು ೩೦ ವರ್ಷಗಳಾದರೂ, ಇದುವರೆಗೂ ಒಬ್ಬರಿಗೂ, ಶಿಕ್ಷೆ ಯಾಗಿರುವ ಉದಾಹಣೆಗಳು ಇಲ್ಲ. ಕಠಿಣ ಕಾನೂನುಗಳನ್ನು ಜಾರಿ ಮಾಡುವುದಷ್ಟೇ ಅಲ್ಲ ಸಮರ್ಪಕವಾಗಿ ಅನುಷ್ಠಾನಗೊಳಿಸುವುದೂ ಸರ್ಕಾರದ ಕರ್ತವ್ಯವಾಗಿದ್ದು, ಸಾರ್ವಜನಿಕರೂ ಇದಕ್ಕೆ ಸಹಕರಿಸಿದರೆ ಭ್ರೂಣ ಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತದೆ.

-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!