ಭಾರತದ ಸೈಬರ್ ಅಪರಾಧ ಪ್ರೇರಿತ ನಕಲಿ ವಿದೇಶಿ ಕೆಲಸಗಳ ವಂಚನೆಗೆ ಸಂಬಂಧಿಸಿದ ವರದಿಗಳ ಪ್ರಕಾರ ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ನಿರುದ್ಯೋಗಿಗಳು ಅತಿ ಹೆಚ್ಚು ವಂಚನೆಗೆ ಒಳಗಾಗುತ್ತಿದ್ದಾರೆ.
ಅಂಕಿ ಅಂಶಗಳ ಪ್ರಕಾರ ೨೦೨೪ರಲ್ಲಿ ಹಲವರು ೨,೦೦೦ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ನಕಲಿ ಕೆಲಸದ ಆಫರ್ಗಳ ಮೂಲಕ ಕಳೆದುಕೊಂಡಿದ್ದಾರೆ. ಕೆಲವೊಮ್ಮೆ ವಂಚಕರು ವಿದೇಶಗಳಲ್ಲಿ ಕೆಲಸದ ಹೆಸರಿನಲ್ಲಿ ಜನರನ್ನು ಸೈಬರ್ ದಾಸ್ಯಕ್ಕೆ ಸಿಲುಕಿಸುತ್ತಾರೆ.
ವಂಚಕರು ಸಿಂಗಪೂರ್, ಥಾಯ್ಲ್ಯಾಂಡ್, ದುಬೈ ಮುಂತಾದ ದೇಶಗಳಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ಹಾಗೂ ‘ವೀಸಾ ಪ್ರಕ್ರಿಯೆ’ ಅಥವಾ ‘ ತರಬೇತಿ ಶುಲ್ಕ’ದ ಹೆಸರಿನಲ್ಲಿ ಹಣ ಪಡೆದು ನಂತರ ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಜನರನ್ನು ವಿದೇಶಗಳಿಗೆ ಕಳುಹಿಸಿ ಸೈಬರ್ ಅಪರಾಧ ಅಥವಾ ಬಲವಂತದ ಕಾರ್ಮಿಕತ್ವಕ್ಕೆ ಒಳಪಡಿಸುತ್ತಾರೆ. ಇಂತಹ ವಂಚನೆಗಳು ಕೇವಲ ಆರ್ಥಿಕ ನಷ್ಟವಷ್ಟೇ ಅಲ್ಲ, ಮಾನಸಿಕ ನೋವಿಗೂ ಕಾರಣವಾಗುತ್ತವೆ. ಆದ್ದರಿಂದ ಸರ್ಕಾರ ಜನಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ. ಯಾವುದೇ ಕೆಲಸಕ್ಕಾಗಿ ಮೊದಲು ಹಣ ಕೇಳಿದರೆ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ತಕ್ಷಣ ಅಧಿಕೃತ ಸಂಸ್ಥೆಗಳ ಮೂಲಕ ಪರಿಶೀಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ವಂಚನೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.
-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು





