ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುವಂತಾಗಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯಿದೆ (ಆರ್ಟಿಇ) ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ರಾಜ್ಯದ ೩೫ ಶೈಕ್ಷಣಿಕ ಜಿಲ್ಲೆಗಳ ಅನುದಾನಿತ ಶಾಲೆಗಳಲ್ಲಿ ೧೧,೪೫೪ ಸೀಟುಗಳನ್ನು ಆರ್ಟಿಇ ಅಡಿ ಪ್ರವೇಶಕ್ಕೆ ಮೀಸಲಿಡಲಾಗಿದೆ. ಆದರೆ ೨,೪೯೯ ಸೀಟುಗಳು ಮಾತ್ರ ಭರ್ತಿಯಾಗಿವೆ.
ಇದರಲ್ಲಿ ತುಮಕೂರಿನ ಮಧುಗಿರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರ್ಟಿಇ ಅಡಿ ಒಂದೇ ಒಂದು ಸೀಟೂ ಭರ್ತಿಯಾಗಿಲ್ಲ. ಖಾಸಗಿ ಶಾಲೆಗಳಲ್ಲಿ ಶೇ.೨೫ರಷ್ಟು ಪ್ರವೇಶವನ್ನು ಬಡ ಮಕ್ಕಳಿಗಾಗಿ ಮೀಸಲಿಟ್ಟು, ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಆದರೆ ಈಗ ಖಾಸಗಿ ಶಾಲೆಗಳ ಆಡಳಿತ ಮಂಡಳಿಯು ಈ ಯೋಜನೆಯನ್ನು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿದ್ದರಿಂದ, ಆರ್ಟಿಇ ಬಗ್ಗೆ ಪೋಷಕರು ನಿರಾಸಕ್ತಿ ತೋರುತ್ತಿದ್ದಾರೆ.
ಇದಕ್ಕೆ ಸರ್ಕಾರ ಯಾವುದೇ ಕ್ರಮ ಅಥವಾ ನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಬಡ ಮಕ್ಕಳ ಭವಿಷ್ಯದ ಗತಿ ಏನಾಗಬೇಕು? ಇನ್ನು ಶಿಕ್ಷಕ, ಶಿಕ್ಷಕಿಯರ ಕೊರತೆಯಿಂದ ಎಷ್ಟೋ ವಿದ್ಯಾರ್ಥಿಗಳು ಶಾಲೆ ತೊರೆಯಲು ಮುಂದಾಗಿದ್ದಾರೆ. ಸರ್ಕಾರ ಕೂಡಲೇ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಸುಧಾರಣೆ ಮಾಡಬೇಕಿದೆ.
– ಎನ್.ಆಶಾ, ಬೆಂಗಳೂರು





