ಇತ್ತೀಚೆಗೆ ಕೆಲವು ರಾಜಕಾರಣಿಗಳು ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ‘ಕ್ರಾಂತಿ’ ಯಾಗುತ್ತದೆ ಎಂದು ಹುಯಿಲೆಬ್ಬಿಸುತ್ತಿರುವುದು ಮಾಧ್ಯಮಗಳಲ್ಲಿವರದಿಯಾಗುತ್ತಿದೆ. ‘ಕ್ರಾಂತಿ’ ಎಂಬ ಪದಕ್ಕೆ ಅತ್ಯಂತ ವಿಶಾಲವಾದ ಅರ್ಥವಿದೆ. ಜಗತ್ತಿನ ಇತಿಹಾಸದಲ್ಲಿ ಫ್ರಾನ್ಸ್ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ಸೇರಿದಂತೆ ನೂರಾರು ಕ್ರಾಂತಿಗಳು ಹಾಸು ಹೊಕ್ಕಾಗಿವೆ. ವಿಶ್ವದ ಬಹುತೇಕ ರಾಷ್ಟ್ರಗಳು ಒಂದಲ್ಲಾ ಒಂದು ರೀತಿಯ ಕ್ರಾಂತಿಗೆ ಒಳಗಾಗಿರುವುದು ಇತಿಹಾಸದ ಪುಟಗಳಲ್ಲಿ ಕಂಡು ಬರುತ್ತದೆ.
ಕ್ರಾಂತಿ ಎಂದರೆ, ದುಷ್ಟ ಆಡಳಿತದ ಕೊನೆ ಹಾಗೂ ಹೊಸ ವ್ಯವಸ್ಥೆಯ ಉಗಮ ಎಂಬ ಸಾಮಾನ್ಯ ಅರ್ಥವಿದೆ. ದುರಾಡಳಿತದಿಂದ ಬೇಸತ್ತ ಜನತೆ, ಹೊಸ ರೀತಿಯ ಆಡಳಿತ ಬಯಸಿ ಕ್ರಾಂತಿಗೆ ಮುನ್ನುಡಿ ಬರೆಯುವುದು ಸಹಜವಾಗಿದೆ. ಆದರೆ, ಒಂದು ರಾಜಕೀಯ ಪಕ್ಷದ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ‘ಕ್ರಾಂತಿ ’ಎಂಬ ಪದವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಕೆಲವು ರಾಜಕಾರಣಿಗಳು ಬಳಸುತ್ತಿರುವುದು ವಿಷಾದಕರ ಸಂಗತಿಯಾಗಿದೆ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





