ನಾಡಹಬ್ಬ ದಸರಾ ವಿಧ್ಯುಕ್ತವಾಗಿ ಉದ್ಘಾಟನೆಯಾಗಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ನಗರದಲ್ಲಿ ೧೩೬ ಕಿ.ಮೀ. ವ್ಯಾಪ್ತಿಯ ರಸ್ತೆಗಳು ಮತ್ತು ೧೧೮ ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ.
ಈ ವಿದ್ಯುತ್ ದೀಪಗಳ ಅಲಂಕಾರ ಮೈಸೂರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ, ಈ ಸಂಭ್ರಮದಲ್ಲಿ ನಾವು ಸುರಕ್ಷತೆಯ ಬಗ್ಗೆಯೂ ಗಮನಹರಿಸುವುದು ಮುಖ್ಯ. ದೀಪಾಲಂಕಾರದ ಮುಂದೆ ನಿಂತು ಸೆಲ್ಛಿ ತೆಗೆದುಕೊಳ್ಳುವುದು ಸಹಜ. ಆದರೆ, ರಸ್ತೆ ಮಧ್ಯೆ ನಿಂತು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ಸೆಲ್ಛಿ ತೆಗೆದುಕೊಳ್ಳುವುದು, ವಿದ್ಯುತ್ ಕಂಬಗಳ ಬಳಿ ಹೋಗಿ ಅವುಗಳನ್ನು ಮುಟ್ಟಿ ಫೋಟೋ ತೆಗೆದುಕೊಳ್ಳುವಾಗ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ.
ಹೀಗಾಗಿ, ದೀಪಾಲಂಕಾರವನ್ನು ದೂರದಿಂದಲೇ ನೋಡುವಂತೆ ಸಾರ್ವಜನಿಕರಿಗೆ ಸಂಬಂಧಪಟ್ಟವರು ಸೂಚನೆ ನೀಡುವುದು ಅಗತ್ಯ.ದೀಪಾಲಂಕಾರವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನಬರುವುದರಿಂದ ನೂಕುನುಗ್ಗಲು ಉಂಟಾಗಬಹುದು. ಆದ್ದರಿಂದ ಸಾರ್ವಜನಿಕರು ಜನಸಂದಣಿಯಲ್ಲಿ ತಮ್ಮ ವಸ್ತುಗಳು, ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಪೊಲೀಸ್ ಮತ್ತು ಸೆಸ್ಕ್ ಸಿಬ್ಬಂದಿ ನೀಡುವ ಸಲಹೆ ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
-ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





