ಮೈಸೂರಿನಿಂದ ಎಚ್.ಡಿ. ಕೋಟೆಗೆ ತೆರಳುವ ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಸಿಗುವ ಹೈರಿಗೆ ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. ಆದರೆ ನೀರಾವರಿ ಇಲಾಖೆಯಿಂದ ಗ್ರಾಮದ ಪೌರ ಕಾರ್ಮಿಕರ ಬೀದಿಗೆ ಸುಮಾರು ೨೮ ಲಕ್ಷ ರೂ.ವೆಚ್ಚದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಲು ಹಾಗೂ ಸಿಸಿ ರಸ್ತೆ ವ್ಯವಸ್ಥೆ ನಿರ್ಮಾಣಕ್ಕೆ ಕ್ರಿಯಾಯೋಜನೆ ಮಾಡಲಾಗಿತ್ತು, ಆದರೆ ಗುತ್ತಿಗೆದಾರರು ಚರಂಡಿ ಕಾಮಗಾರಿ ಹಾಗೂ ಸಿಸಿ ರಸ್ತೆ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಬಿಲ್ ಮಾಡಿಸಿಕೊಂಡು ಅರ್ಧಕ್ಕೆ ಕೈ ಬಿಟ್ಟಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟ ವಾರ್ಡ್ನ ಸದಸ್ಯರು, ಸಂಬಂಧಪಟ್ಟ ಇಲಾಖೆಗೆ ಮನವಿ ಪತ್ರ ನೀಡಿದರೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಹೀಗಾಗಿ ಪೌರ ಕಾರ್ಮಿಕರ ಬೀದಿಯಲ್ಲಿ ನಿರ್ಮಿಸಿರುವ ಚರಂಡಿ ಭೂಮಿಯಿಂದ ಎರಡು ಅಡಿ ಎತ್ತರದಲ್ಲಿದೆ. ಈ ಬೀದಿಯಲ್ಲಿ ಸಣ್ಣ ಮಕ್ಕಳು ಮನೆಯಿಂದ ಬೀದಿಗೆ ಬರಬೇಕಾದರೆ ಬಹಳ ಹರಸಾಹಸ ಪಡುತ್ತಿದ್ದಾರೆ. ಎಷ್ಟೋ ಮಕ್ಕಳು ಮನೆಯ ಮುಂದೆ ನಿರ್ಮಾಣವಾಗಿರುವ ಚರಂಡಿಗೆ ಬಿದ್ದಿರುವ ಘಟನೆಗಳೂ ನಡೆದಿವೆ.
ಆದ್ದರಿಂದ ಬಾಕಿ ಇರುವ ಕಾಮಗಾರಿಯನ್ನು ತಕ್ಷಣ ಪೂರ್ಣ ಗೊಳಿಸಬೇಕು. ಅಧಿಕಾರಿಗಳು, ಶಾಸಕರು, ಸಂಸದರು ಗುತ್ತಿಗೆದಾರರನ್ನು ಕರೆಸಿ ಪೌರಕಾರ್ಮಿಕರ ಬೀದಿಯಲ್ಲಿ ಉಳಿದಿರುವ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
– ಸಿದ್ದಲಿಂಗೇಗೌಡ,ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾಲ್ಲೂಕು





