Mysore
20
clear sky

Social Media

ಮಂಗಳವಾರ, 10 ಮಾರ್ಚ್ 2026
Light
Dark

ಓದುಗರ ಪತ್ರ: ಇ-ಸ್ವತ್ತು ಗೊಂದಲ ಬಗೆಹರಿಸಿ

ಓದುಗರ ಪತ್ರ

ಅಕ್ರಮ ಖಾತೆಗಳನ್ನು ಸಕ್ರಮಗೊಳಿಸಲು ಸರ್ಕಾರ ಕೈಗೊಂಡ ತಪ್ಪು ನಿರ್ಧಾರದಿಂದ ಲಕ್ಷಾಂತರ ಮಂದಿ ಇ-ಖಾತೆ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರದ ವೇಳೆ ವಿಷಯ ಪ್ರಸ್ತಾಪಿಸಿ ಹತ್ತಾರು ವರ್ಷಗಳಿಂದ ಅಕ್ರಮವಾಗಿ ಅನಧಿಕೃತ ಮನೆ ಗಳಲ್ಲಿ ವಾಸ ಮಾಡುವವರಿಂದ ಸರ್ಕಾರ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಬೇಕೆಂದು ಗಮನ ಸೆಳೆದಿದ್ದರು. ಸರ್ಕಾರ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ೧೯೭೦ರ ನಂತರ ಟೌನ್ ಪ್ಲಾನ್ ನಿಬಂಧನೆಗೆ ಒಳಪಡದೇ ಲೇಔಟ್ ನಿರ್ಮಿಸಿದ್ದರೆ ಅಂತಹವರಿಗೂ ದಂಡ ವಿಧಿಸಬೇಕು.

ದ್ವಿಗುಣ ದಂಡ ವಸೂಲಿ ಮಾಡಿಕೊಂಡು ಎ ಖಾತೆದಾರರಿಗೂ ಬಿ-ಖಾತೆಗೆ ಪರಿವರ್ತಿಸಬೇಕು ಎಂದು ಪೌರಡಳಿತ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆಯಿಂದ ಎ-ಖಾತೆ ಹೊಂದಿರುವವರೆಲ್ಲರನ್ನೂ ಬಿ-ಖಾತೆಗೆ ಪರಿವರ್ತಿಸಲಾಗಿದೆ. ಇದರಿಂದ ಆಸ್ತಿಗಳ ಮೇಲೆ ಯಾವುದೇ ಸಾಲ ಪಡೆಯದ ಸ್ಥಿತಿ ಉಂಟಾಗಿದೆ. ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸುವವರಿಗೆ ಸಕ್ರಮಗೊಳಿಸುವಂತೆ ಸೂಚಿಸಿದ್ದಾರೆ. ಇವರಿಗೆ ಯಾವುದೇ ದಂಡವೂ ಇಲ್ಲ ಎಂದು ತಿಳಿಸಿದ್ದಾರೆ.

ಹೀಗಾಗಿ ಸರ್ಕಾರದ ಈ ದ್ವಂದ್ವ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನವಶ್ಯವಾಗಿ ತೊಂದರೆ ಕೊಟ್ಟಂತಾಗಿದೆ. ಸರ್ಕಾರ ಈಗಿನ ಗೊಂದಲ ಬಗೆಹರಿಸಿ ಇಡೀ ರಾಜ್ಯದ ಜನತೆಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಲಿ.

-ಎ.ಎಚ್.ಗೋವಿಂದ, ಹಿರಿಯ ಪತ್ರಕರ್ತ, ಕೊಳ್ಳೇಗಾಲ.

Tags:
error: Content is protected !!