ವಿಜಯಪುರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಸೌಂಡ್ ಆರ್ಭಟಕ್ಕೆ ೧೭ ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದು ಆತಂಕಕಾರಿ ವಿಷಯ. ನಗರ ಪ್ರದೇಶಗಳಲ್ಲಿ ಗಣೇಶ ಹಬ್ಬವನ್ನು ಅತ್ಯಂತ ವೈಭವಯುತವಾಗಿ ಆಚರಿಸಲು ಈಗ ಯುವಕರು ಡಿಜೆ ಅಳವಡಿಸಿ ಭಾರಿ ಸದ್ದಿಗೆ ಕುಣಿಯುವುದನ್ನು ಎಲ್ಲರೂ ಗಮನಿಸಿರುತ್ತಾರೆ.
ಈ ಶಬ್ದದಿಂದಾಗಿ ಹೃದಯ ಸಂಬಂಧಿ ರೋಗಿಗಳು, ಚಿಕ್ಕ ಮಕ್ಕಳು, ವಯೋವೃದ್ದರು ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕುವಂತೆ ಆಗಿದೆ. ಮುಂದಾದರೂ ಪ್ರಾಣಕ್ಕೆ ಕುತ್ತು ತರುವ ಡಿಜೆ ಸೌಂಡ್ ಬಳಕೆಗೆ ಸಂಪೂರ್ಣ ನಿಷೇಧ ಹೇರುವ ಅಗತ್ಯವಿದೆ. ಸಂಬಂಧಪಟ್ಟವರು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ, ಹಬ್ಬ, ಉತ್ಸವ ಆಚರಣೆ ಮಾಡುವಾಗ ಜನ ಸಾಮಾನ್ಯರ ಹಿತ ದೃಷ್ಟಿಯಿಂದ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ.
–ಡಾ.ಎ.ಕೆ. ಜಯವೀರ, ಖೇಮಲಾಪುರ, ರಾಯಬಾಗ ತಾಲ್ಲೂಕು





