ಆನಂದ್ ಹೊಸೂರು
ಹೊಸೂರು: ಮೈಸೂರು ಜಿಲ್ಲೆಯ ಏಕೈಕ ಸಹಕಾರ ಸಕ್ಕರೆ ಕಾರ್ಖಾನೆಗೆ ಹಿಡಿದಿದ್ದ ಗ್ರಹಣ ಕಳಚುವ ಸಂದರ್ಭ ಕೂಡಿ ಬಂದಿದ್ದು, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸರ್ಕಾರ ಅಽಕೃತವಾಗಿ ಮುನ್ನುಡಿ ಬರೆದಿದೆ.
ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಶ್ರೀರಾಮ ಕಾರ್ಖಾನೆಯ ನೋಂದಣಿ ಕಾರ್ಯಕ್ಕೆ ಸರ್ಕಾರ ಜನವರಿ ೨ರ ಡೆಡ್ಲೈನ್ ನೀಡಿದ್ದು ಮುಂದಿನ ಜುಲೈ ಅಥವಾ ಆಗಸ್ಟ್ನಿಂದ ಕಬ್ಬು ನುರಿಸಲು ಅನುವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ನಿರಾಣಿ ಶುಗರ್ಸ್ನವರಿಗೆ ನಿರ್ದೇಶನ ನೀಡಿದೆ.
೨೦೧೨ರಿಂದ ೨೦೨೨ರವರೆಗೆ ಕಾರ್ಖಾನೆ ಸ್ಥಗಿತಗೊಂಡು ಸಂಪೂರ್ಣ ಹಾಳಾಗಿತ್ತು. ಅಂದಿನ ಶಾಸಕರಾಗಿದ್ದ ಸಾ. ರಾ ಮಹೇಶ್ರವರ ಪ್ರಯತ್ನದ ಫಲವಾಗಿ ಹಲವಾರು ಬಾರಿ ಟೆಂಡರ್ ಕರೆದರೂ ಯಾರೂ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಕಾರ್ಖಾನೆ ಪಾಳು ಬಿದ್ದಿತ್ತು. ನಂತರ ನಿರಾಣಿ ಸಮೂಹದ ಮನವೊಲಿಸಿ ೨೦೨೩ರಲ್ಲಿ ಕಾರ್ಖಾನೆಯನ್ನು ಗುತ್ತಿಗೆ ನೀಡಲಾಗಿತ್ತು.
ಅದರ ಫಲವಾಗಿ ೨೦೨೩ರ ಹಂಗಾಮಿನಲ್ಲಿ ಸುಮಾರು ೨೦ ಸಾವಿರ ಟನ್ ಕಬ್ಬು ಅರೆದರೂ ಪದೇ ಪದೇ ಕೈಕೊಡುತ್ತಿದ್ದ ಹಳೆಯ ಯಂತ್ರಗಳಿಂದ ಹೆಚ್ಚಿನ ಕಾರ್ಯದಕ್ಷತೆ ಇಲ್ಲ ಎಂದು ಮನಗಂಡು ಕಾರ್ಖಾನೆಯ ಗುತ್ತಿಗೆಯನ್ನು ನೋಂದಣಿ ಮಾಡಿಸಿ ಎಂದು ಹೇಳಿ ಕೆಲವು ನಿಬಂಧನೆಗಳನ್ನು ವಿಽಸಿ ನಿರಾಣಿ ಸಮೂಹ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿತ್ತು. ನೋಂದಣಿಗೆ ಬೇಕಾಗುವ ಸುಮಾರು ೨ ಕೋಟಿ ರೂ. ಶುಲ್ಕದ ವಿನಾಯಿತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಅದರಂತೆ ಸರ್ಕಾರ ಆರ್ಥಿಕ ಇಲಾಖೆ ಮತ್ತು ಕಬ್ಬು ಅಭಿವೃದ್ಧಿ ಸಚಿವಾಲಯ ಎಲ್ಲಾ ಪಕ್ರಿಯೆಗಳನ್ನು ಪೂರ್ಣಗೊಳಿಸಿ ಆ. ೩ರಂದು ಆರ್ಥಿಕ ಇಲಾಖೆಯ ಟಿಪ್ಪಣಿಯೊಂದಿಗೆ ಎನ್ಪಿವಿ ಆಧಾರದಂತೆ ನೋಂದಣಿ ಪ್ರಕ್ರಿಯೆ ಮುಗಿಸುವಂತೆ ಹಾಗೂ ೨ ಕೋಟಿ ರೂ. ನೋಂದಣಿ ವೆಚ್ಚವನ್ನು ಮನ್ನಾ ಮಾಡಿ ಹಾಗೂ ೨೦೨೨-೨೩ರಿಂದ ೪೦ ವರ್ಷಗಳಿಗೆ ವಿಸ್ತರಿಸಿ ಗುತ್ತಿಗೆ ನೀಡಲು ಆದೇಶಿಸಿದೆ.
ಕಾರ್ಖಾನೆಯನ್ನು ಈ ವ್ಯಾಪ್ತಿಯ ಕೆ. ಆರ್ ನಗರ, ಸಾಲಿಗ್ರಾಮ, ಹುಣಸೂರು, ಪಿರಿಯಾಪಟ್ಟಣ, ಹೆಚ್. ಡಿ. ಕೋಟೆ ತಾಲ್ಲೂಕುಗಳ ರೈತರು ಅವಲಂಬಿಸಿದ್ದಾರೆ. ಈ ಭಾಗದ ಕಬ್ಬನ್ನು ಮಂಡ್ಯ ಜಿಲ್ಲೆಯ ವಿವಿಧ ಕಾರ್ಖಾನೆಗಳಿಗೆ ಕಳುಹಿಸಿ ಅರೆಸಲಾಗುತ್ತಿದ್ದು, ಚುಂಚನಕಟ್ಟೆ ಕಾರ್ಖಾನೆ ಆರಂಭವಾದರೆ ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ರೈತರಿಗೆ ಅನುಕೂಲವಾಗಲಿದೆ.
ಕಾರ್ಖಾನೆಯ ನೋಂದಣಿ ಕಾರ್ಯಕ್ಕೆ ಜನವರಿ ೨ರ ಡೆಡ್ಲೈನ್ ನೀಡಿದ ಸರ್ಕಾರ ಕಾರ್ಖಾನೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಸಕ್ಕರೆ ಖಾತೆ ಸಚಿವರಿಗೆ ಮನವಿ ಮಾಡಿದ ಪರಿಣಾಮ ನೋಂದಣಿಗೆ ಅವಕಾಶ ನೀಡಿದ್ದು, ಮುಂದಿನ ಹಂಗಾಮಿನ ಕಬ್ಬನ್ನು ನಮ್ಮ ಕಾರ್ಖಾನೆಯಲ್ಲೇ ನುರಿಸುವ ಕೆಲಸವಾಗಲಿದೆ. ಇದರಿಂದ ನಮ್ಮ ರೈತರು ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದೆ.
-ಡಿ. ರವಿಶಂಕರ್, ಶಾಸಕ
ಸ್ಥಳೀಯ ಯುವಕರು, ರೈತರು, ಸಾವಿರಾರು ಅವಲಂಬಿತರಿಗೆ ಈ ಕಾರ್ಖಾನೆ ಆಧಾರವಾಗ ಲಿದೆ. ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘವು ೨೦೧೨ರಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದು ನಮಗೆ ಈಗ ಯಶಸ್ಸು ಸಿಕ್ಕಿದೆ. -ಅಂಕನಹಳ್ಳಿ ತಿಮ್ಮಪ್ಪ, ರಾಜ್ಯ ಉಪಾಧ್ಯಕ್ಷ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ





