-ಕೆ.ಬಿ.ರಮೇಶನಾಯಕ
ಮೈಸೂರು: ಕಳೆದ ಐದಾರು ವರ್ಷಗಳಿಂದ ಬಡವರು, ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಬಹುಮಹಡಿ ಕಟ್ಟಡಗಳ ಗುಂಪು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವುದಾಗಿ
ಹೇಳಿಕೊಂಡು ಬಂದಿದ್ದ ಯೋಜನೆಯನ್ನೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೈ ಬಿಟ್ಟಿದೆ.
ಮುಡಾದಲ್ಲಿ ಹಿಂದೆ ಕಾರ್ಯ ನಿರ್ವಹಿಸಿದ್ದ ಇಬ್ಬರು ಆಯುಕ್ತರು ಪ್ರತಿವರ್ಷ ಆಯವ್ಯಯದಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸುತ್ತಲೇ ಬಂದಿದ್ದರು. 2024ನೇ ಸಾಲಿನ ಬಜೆಟ್ನಲ್ಲಿ ಈ ಯೋಜನೆಗೆ 250 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ ಇದೀಗ ಈ ಯೋಜನೆ ಕಾರ್ಯ ಸಾಧುವಲ್ಲ ಎಂದು ಮುಡಾ ಕೈಚೆಲ್ಲಿದೆ. ಇದರಿಂದಾಗಿ ಮನೆ ಕೋರಿ ಬೇಡಿಕೆ ಸಮೀಕ್ಷೆಯಲ್ಲಿ ಸಲ್ಲಿಕೆಯಾಗಿದ್ದ 26 ಸಾವಿರ ಅರ್ಜಿಗಳು ಕಸದ ಬುಟ್ಟಿಗೆ ಸೇರಿವೆ. ಇದರ ಜತೆಗೆ 2021ರ ದಸರಾ ಮಹೋತ್ಸವದಲ್ಲಿ ಲಕ್ಷಾಂತರ ಜನರ ಕಣ್ಮನ ಸೆಳೆದಿದ್ದ ಯೋಜನೆಯ ವಿನ್ಯಾಸದ ಸ್ತಬ್ಧಚಿತ್ರ ಬರೀ ಕನಸಾಗಿಯೇ ಉಳಿಯುವಂತಾಗಿದೆ.
ನಗರದ ಪ್ರತಿಯೊಬ್ಬ ಕಡು ಬಡವರು, ಮಧ್ಯಮ ವರ್ಗದ ಜನರಿಗೆ ನಿವೇಶನ ಅಥವಾ ಮನೆ ನಿರ್ಮಿಸಿ ಹಂಚಿಕೆ ಮಾಡುವ ಮೂಲ ಆಶಯ ಹೊಂದಿದ್ದ ಮುಡಾಕ್ಕೆ ಬದಲಾದ ಕಾಲಕ್ಕೆ ತಕ್ಕಂತೆ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿ ಬಹುಮಹಡಿ ಗುಂಪು ಮನೆಗಳನ್ನು ಅನುಷ್ಠಾನಗೊಳಿಸಲು 2018ರಲ್ಲಿ ಯೋಜನೆ ರೂಪಿಸಲಾಗಿತ್ತು. ಎರಡು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾದಿದ್ದ 80 ಸಾವಿರ ಅರ್ಜಿಗಳ ಜತೆಗೆ 2020ರಲ್ಲಿ ಮನೆ ಕೋರಿ ಬೇಡಿಕೆ ಸಮೀಕ್ಷೆಯಲ್ಲಿ 26 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಹೀಗಾಗಿ, 2021ರಲ್ಲಿ ರಾಮಕೃಷ್ಣನಗರ, ಗೋಕುಲಂ, ವಿಜಯನಗರ ನಾಲ್ಕನೇ ಹಂತ ಎರಡನೇ ಘಟ್ಟದಲ್ಲಿ 12
ಅಂತಸ್ತಿನ ಬಹುಮಹಡಿ ಕಟ್ಟಡವನ್ನು ಶಿಯರ್ ವಾಲ್ ಟೆಕ್ನಾಲಜಿಸ್ ಅಳವಡಿಸಿಕೊಂಡು ನಿರ್ಮಾಣ ಮಾಡಲು ಪ್ರಾಧಿಕಾರದಿಂದ ಅನುಮೋದನೆ ಪಡೆಯಲಾಗಿತ್ತು. ನಂತರ, 250 ಕೋಟಿ ರೂ.ಅಂದಾಜಿನ ಡಿಪಿಆರ್ ತಯಾರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಮಹತ್ವದ ಯೋಜನೆ ಕಾರ್ಯರೂಪಕ್ಕೆ ಬರುವ ಹೊತ್ತಿನಲ್ಲೇ ಕಳೆದ ವರ್ಷ ನಡೆದ ಮುಡಾ ಅವ್ಯವಹಾರದ ಪ್ರತಿಧ್ವನಿ ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗಾಗುವಂತೆ ಮಾಡಿಸಿದೆ.
ಮುಡಾದಲ್ಲಿ ಸರ್ಕಾರದ ನಿರ್ದೇಶನ ಇಲ್ಲದೆ ಒಂದು ಸಣ್ಣ ತೀರ್ಮಾನವನ್ನೂ ಮಾಡಲು ಮುಂದಾಗದ
ಜಿಲ್ಲಾಧಿಕಾರಿಗಳೂ ಆದ ಅಧ್ಯಕ್ಷ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ ಎ.ಎನ್.ರಘುನಂದನ್ ಅವರು ಗುಂಪು ಮನೆ ನಿರ್ಮಾಣದ ಯೋಜನೆಯಿಂದ ಆಗುವ ನಷ್ಟ, ಹಣಕಾಸಿನ ಭಾರ ಮತ್ತು ಸರ್ಕಾರದಿಂದ ಈ ಯೋಜನೆಗೆ
ಅಸಮ್ಮತಿ ದೊರೆತಿರುವ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಮತ್ತೊಮ್ಮೆ ಪ್ರಸ್ತಾಪಿಸುವ ಗೋಜಿಗೆ ಹೋಗಲಿಲ್ಲ ಎಂದು ಹೇಳಲಾಗಿದೆ.
- ಹಿಂದಿನ ಇಬ್ಬರು ಆಯುಕ್ತರು ಪ್ರಸ್ತಾಪಿಸುತ್ತಲೇ ಬಂದಿದ್ದ ಯೋಜನೆ ಕಾರ್ಯಸಾಧುವಲ್ಲ ಎಂದ ಸರ್ಕಾರ
- 2021ರ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನವಾಗಿದ್ದ 12 ಮಹಡಿಗಳ ಕಟ್ಟಡದ ಸ್ತಬ್ಧಚಿತ್ರ
- ಗುಂಪು ವಸತಿ ಮನೆ ಕೋರಿ ಬೇಡಿಕೆ ಸಮೀಕ್ಷೆಯಲ್ಲಿ ಸಲ್ಲಿಕೆಯಾಗಿದ್ದವು 26 ಸಾವಿರ ಅರ್ಜಿಗಳು
50:50 ದುಸ್ಸಾಹಸ ಕೈಬಿಟ್ಟ ಮುಡಾ
ಖಾಸಗಿ ಬಡಾವಣೆಗಳ ನಡುವೆ ಶೇ.50:50 ಅನುಪಾತದಡಿ ಮುಡಾ ಬಡಾವಣೆ ರಚನೆ ಮಾಡುವ
ದುಸ್ಸಾಹಸವನ್ನು ಅಧಿಕಾರಿಗಳು ಕೈ ಬಿಟ್ಟಿದ್ದಾರೆ. 50:50ನಿವೇಶನ ಹಂಚಿಕೆಯಲ್ಲಿ ಈಗ ಹಲವಾರು ತನಿಖೆ
ಎದುರಿಸುತ್ತಿರುವ ಪರಿಣಾಮವಾಗಿ ಹೊಸದಾಗಿ ಇಂತಹ ಯೋಜನೆಗಳನ್ನು ಮಾಡಿ ಮತ್ತಷ್ಟು ಪೇಚಿಗೆ ಸಿಲುಕುವ ಬದಲಿಗೆ ನೇರವಾಗಿ ರೈತರಿಂದ ಭೂಮಿ ಖರೀದಿಸಿ ವಸತಿ ಬಡಾವಣೆ ರಚಿಸಲು ಮಾತ್ರ ಆಸಕ್ತಿ ತೋರಿದೆ.
ಗಮನ ಸೆಳೆದಿದ್ದ ಸ್ತಬ್ಧಚಿತ್ರ
12 ಮಹಡಿಗಳ ಕಟ್ಟಡ ವಿನ್ಯಾಸದ ಮಾದರಿಯಲ್ಲಿ ಸ್ತಬ್ಧಚಿತ್ರ ತಯಾರಿಸಿ 2021ರ ಜಂಬೂಸವಾರಿ
ಮೆರವಣಿಗೆಯಲ್ಲಿ ಪ್ರದರ್ಶನ ಮಾಡಿದ್ದು, ಸಾಕಷ್ಟು ಜನರ ಗಮನ ಸೆಳೆದಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಲ್ಲಿ ಆರಂಭವಾದ ಮುಡಾದಲ್ಲಿ ಇಂತಹದೊಂದು ಯೋಜನೆ ರೂಪಿಸಿದ್ದಾರೆಂದು ಅನೇಕರು ಸ್ತಬ್ಧಚಿತ್ರ ನೋಡಿಕೊಂಡು ಖುಷಿಪಟ್ಟಿದ್ದರು. ದಸರಾ ಮುಗಿದ ಮೇಲೂ ನಗರದ ಪ್ರಮುಖ ಬಡಾವಣೆಗಳಲ್ಲಿ ಈ ಸ್ತಬ್ಧಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅನೇಕರು ಮನೆ
ನಿರೀಕ್ಷೆಯಲ್ಲಿದ್ದರು.





