Mysore
20
overcast clouds
Light
Dark

ಮಾನಸಿಕ ಸಮಸ್ಯೆಗಳಿಗಿದೆ ಮನೋ ಚೈತನ್ಯ ಕ್ಲಿನಿಕ್

ಕೆ.ಆರ್.ನಗರ: ಕರ್ನಾಟಕದಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇತ್ತೀಚೆಗೆ ಉತ್ತಮ ಮಾನಸಿಕ ಆರೋಗ್ಯ ಚಿಕಿತ್ಸೆಯ ವ್ಯವಸ್ಥೆ ಏರ್ಪಡಿಸಲಾಗಿದೆ.

ಎಲ್ಲೆಡೆ ಮನೋ ಚೈತನ್ಯ ಕ್ಲಿನಿಕ್ ತೆರೆಯಲಾಗಿದೆ. ಅದೇ ರೀತಿ ತಾಲ್ಲೂಕು ಮಟ್ಟದಲ್ಲಿ ಪ್ರತಿ ಮೂರನೇ ಮಂಗಳವಾರ ಮಾನಸಿಕ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೆಯೇ ಚಿಕಿತ್ಸಾ ವ್ಯವಸ್ಥೆಯನ್ನೂ ಮಾಡಲಾಗಿದೆ.

2021ರ ಬಳಿಕ ವರ್ಷದಲ್ಲಿ ಮನೋ ಚೈತನ್ಯ ಕಾರ್ಯಕ್ರಮದ ಅಡಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಎಷ್ಟು ಮಂದಿ ಖಿನ್ನತೆ ಒಳಗಾಗಿದ್ದಾರೆಯೋ ಅವರಿಗೆಲ್ಲ ಮನೋ ಚೈತನ್ಯ ಕ್ಲಿನಿಕ್ ಮೂಲಕ ಚಿಕಿತ್ಸೆಯ ನೆರವು ನೀಡಲು ತಾಲ್ಲೂಕು ಆರೋಗ್ಯ ಇಲಾಖೆ ಸಜ್ಜಾಗಿದೆ. ಇದರ ನೇತೃತ್ವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಾನಸಿಕ ತಜ್ಞ ಡಾ.ಕಿಶೋರ್ ವಹಿಸಿ ಈಗಾಗಲೇ ಚಿಕಿತ್ಸೆ ನೀಡುತ್ತಿದ್ದಾರೆ. ಮೇ 21ರ ಮಂಗಳವಾರ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 450 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಪಕ್ಕದ ತಾಲ್ಲೂಕುಗಳಾದ ಕೆ.ಆರ್. ಪೇಟೆ, ಹುಣಸೂರು, ಪಿರಿಯಾಪಟ್ಟಣ, ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಮಾನಸಿಕ ತಜ್ಞ ವೈದ್ಯರು ಇಲ್ಲದೇ ಇರುವುದರಿಂದ ಈ ತಾಲ್ಲೂಕುಗಳಿಂದಲೂ ಮಾನಸಿಕ ಖಿನ್ನತೆಗೆ ಒಳಗಾದ ಸಾಕಷ್ಟು ಮಂದಿ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ.

ಯಾವುದೇ ನಿರ್ಭಯವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದವರು ಗುಪ್ತವಾಗಿ, ಸಂಕೋಚವಿಲ್ಲದೆ ಟೆಲಿ ಮಾನಸ ಸಹಾಯ ವಾಣಿಗೆ ಕರೆ ಮಾಡಬಹುದು. ಗರ್ಭಿಣಿಯರು ತಮ್ಮ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಮನೋ ಚೈತನ್ಯ ಕ್ಲಿನಿಕ್ ಮೂಲಕ ಹಂಚಿಕೊಂಡರೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಪ್ರತಿ ಮೂರನೇ ಮಂಗಳವಾರ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮನೋ ಚಿಕಿತ್ಸಾ ವೈದ್ಯರ ತಂಡ ಆಗಮಿಸಿ ಚಿಕಿತ್ಸೆ ನೀಡುತ್ತಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕು.
-ಡಾ.ಡಿ.ನಟರಾಜು, ಟಿಎಚ್‌ಒ, ಕೆ.ಆರ್.ನಗರ