ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿ ಮೂರು ನಾಲ್ಕು ದಿನಗಳೇ ಕಳೆದರೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಿತಕರ ಚರ್ಚೆ ನಡೆಯದೇ ಗದ್ದಲದ ವಾತಾವರಣ ಉಂಟಾಗುತ್ತಿದೆ.
ಕಲಾಪ ಆರಂಭ ವಾಗುತ್ತಿದ್ದಂತೆ ವಿರೋಧ ಪಕ್ಷದವರು ಆಪರೇಷನ್ ಸಿಂಧೂರ, ಬಿಹಾರ ರಾಜ್ಯದ ಮತದಾರರ ಪಟ್ಟಿ ಪರಿಶೀಲನೆ ನಿರ್ಧಾರ ಮುಂತಾದ ವಿಷಯಗಳ ಬಗ್ಗೆ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸುತ್ತಿರುವುದರಿಂದ ಸಭಾಧ್ಯಕ್ಷರ ಸೂಚನೆಯ ಮೇರೆಗೆ ಉಭಯ ಸದನಗಳ ಕಲಾಪವನ್ನು ಪದೆ ಪದೇ ಮುಂದೂಡಲಾಗುತ್ತಿದೆ.
ಪ್ರತಿಯೊಂದು ಅಧಿವೇಶನದ ಸಂದರ್ಭದಲ್ಲಿಯೂ ವಿರೋಧಪಕ್ಷಗಳು ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವುದು ಮತ್ತು ಕಲಾಪಕ್ಕೆ ಅಡ್ಡಿಪಡಿಸುವುದು ನಡೆಯುತ್ತಲೇ ಇದೆ. ಆಪ ರೇಷನ್ ಸಿಂಧೂರದ ಬಗ್ಗೆ ನಡೆಯುವ ಚರ್ಚೆಯು ನಮ್ಮ ಸೇನಾ ಬಲವನ್ನು ಟೀಕಿಸುವ, ಸೈನಿಕರ ಸಾಮರ್ಥ್ಯವನ್ನು ಶಂಕಿಸುವ ರೀತಿಯಲ್ಲಿ ಇರದಿದ್ದರೆ ಉತ್ತಮ.
ಸದನದಲ್ಲಿ ಸಭಾಧ್ಯಕ್ಷರು ನೀಡುವ ಸೂಚನೆಗಳನ್ನು ಎಲ್ಲ ಸಂಸದರು ತಪ್ಪದೇ ಪಾಲಿಸಿ, ಸದನದ ಹಿರಿಮೆಯನ್ನು ಎತ್ತಿ ಹಿಡಿಯುವುದು ಹಾಗು ಸಭಾಧ್ಯಕ್ಷರಿಗೆ ಗೌರವ ನೀಡಬೇಕು. ಪ್ರತಿಯೊಬ್ಬ ಸಂಸದರು ತಮ್ಮ ನಡವಳಿಕೆಯಿಂದ ಯಾರ ಮನಸ್ಸಿಗು ನೋವಾಗದಂತೆ ವರ್ತಿಸಿ ಸದನದ ಗೌರವವನ್ನು ಹೆಚ್ಚಿಸಬೇಕಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





