Mysore
23
clear sky

Social Media

ಶನಿವಾರ, 07 ಮಾರ್ಚ್ 2026
Light
Dark

ಕೋಟೆ ಪುರಸಭೆ: ಮೀಸಲಾತಿಗೆ ತಡೆ

• ಮಂಜು ಕೋಟೆ

ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯ ಮೀಸಲಾತಿಗೆ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯ ಮಧು ಕುಮಾ‌ರ್ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದೇ ತಿಂಗಳು ಪುರಸಭಾ ಕಾರ್ಯಾಲಯ, ಹೆಗಡದೇವನ ಕೋಟೆ ಸರ್ಕಾರ ಪುರಸಭೆಯ ಕೋಟೆ ಅಧ್ಯಕ್ಷ ಸ್ಥಾನವನ್ನು ಎಸ್‌ಟಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಗೊಳಿಸಿ ಪ್ರಕಟಿಸಿತ್ತು.

ಆದರೆ, ಅಧ್ಯಕ್ಷ ಸ್ಥಾನದ ಮೀಸಲಾತಿಯ ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದೇ ಇರುವುದರಿಂದ ಅಧಿಕಾರ ದಿಂದ ವಂಚಿತರಾಗುವುದು ಖಚಿತವಾಗಿತ್ತು. ಹೀಗಾಗಿ ಪಕ್ಷದ ಬಹುತೇಕ ಸದಸ್ಯರು ಸಭೆ ನಡೆಸಿ, ಉಪಾಧ್ಯಕ್ಷ ಸ್ಥಾನಕ್ಕೆ ಆಸಿಫ್ ಏಜಾಜ್ ಪಾಷಾ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಸಿ.ನರಸಿಂಹಮೂರ್ತಿ ಅವರನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದರು.

ಮತ್ತೊಂದೆಡೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಪಕ್ಷದ ಸದಸ್ಯರ ನಿರ್ದೇಶನದಂತೆ ಪುರಸಭಾ ಸದಸ್ಯರಾಗಿರುವ ಹೌಸಿಂಗ್ ಬೋರ್ಡಿನ ಮಧುಕುಮಾ‌ರ್ ಅಧ್ಯಕ್ಷ ಮತ್ತು ಉಪಾಧಕ್ಷ ಸ್ಥಾನಗಳ ಮೀಸಲಾತಿಯನ್ನು ಪ್ರಶ್ನಿಸಿ ಕಳೆದ ವಾರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಕಳೆದ ಬಾರಿಯೂ ಅಧ್ಯಕ್ಷ ಮತ್ತು ಉಪಾಧಕ ಸ್ಥಾನಗಳ ಮೀಸಲಾತಿ ಎಸ್‌ಟಿ ಮಹಿಳೆ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಈಗ ಇನ್ನೂ ಒಂದೂವರೆ ವರ್ಷವಿರುವ ಅಧಿಕಾರ ಅವಧಿಯಲ್ಲಿ ಇದೇ ಮೀಸಲಾತಿ ಪ್ರಕಟಗೊಂಡಿರುವುದರಿಂದ ರೋಸ್ಟರ್ ಪದ್ಧತಿ ಜಾರಿಯಾಗಿಲ್ಲ. ಸಾಮಾಜಿಕ ನ್ಯಾಯ ದೊರಕಿಲ್ಲ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಪ್ರಕಟಗೊಳ್ಳದೆ ಇರುವ ಮೀಸಲಾತಿಯನ್ನು ಜಾರಿಗೊಳಿಸಿ, ಘೋಷಿಸಿರುವ ಮೀಸಲಾತಿಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ್ದರು.

ಕೋಟ್ಸ್‌))

ಕೋಟೆ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ರೋಸ್ಟರ್ ಪದ್ಧತಿಯಲ್ಲಿ ಹಾಗೂ ಸಾಮಾಜಿಕ ನ್ಯಾಯದಡಿ ಘೋಷಣೆ ಆಗಿರಲಿಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದೆ. ಮೀಸಲಾತಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.
-ಮಧು ಕುಮಾರ್ ಪುರಸಭಾ ಸದಸ್ಯರು

ನಾಯಕ ಸಮುದಾಯದ ಮಹಿಳಾ ಸದಸ್ಯರು ಮತ್ತೊಮ್ಮೆ ಪುರಸಭೆಯಲ್ಲಿ ಅಧಿಕಾರ ನಡೆಸಿ ಪಟ್ಟಣವನ್ನು ಅಭಿವೃದ್ಧಿಪಡಿಸಲು ಮೀಸಲಾತಿ ಯಿಂದ ಅವಕಾಶ ಒದಗಿಬಂದಿತ್ತು. ಆದರೆ, ಈ ಮೀಸಲಾತಿಗೆ ಕೆಲ ಸದಸ್ಯರು ನ್ಯಾಯಾಲಯ ದಿಂದ ತಡೆಯಾಜ್ಞೆ ತಂದಿರುವುದರಿಂದ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಮಹಿಳಾ ಸದಸ್ಯರು ನಿರೀಕ್ಷಿಸುತ್ತಿದ್ದಾರೆ.
-ಸರೋಜಮ್ಮ, ಪುರಸಭಾ ಸದಸ್ಯರು

Tags:
error: Content is protected !!