ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮಸ್ಥರು ಬುಧವಾರ, ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡುತ್ತಿರುವ ಕೆರೆಯ ಕೂಲಿ ಕೆಲಸಕ್ಕೆ ಹೋಗುವುದರ ಮೂಲಕ ಒಂದು ತಿಂಗಳ ಕಾಲ ನಡೆದ ಜಂಜಾಟದಿಂದ ಹೊರ ಬಂದಿದ್ದಾರೆ. ಇಂಡಿಗನತ್ತ ಗ್ರಾಮಕ್ಕೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು.
ಆದರೂ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದರಿಂದ ಕೆಲವು ಅಹಿತಕರ ಘಟನೆಗಳು ನಡೆದು ಅಧಿಕಾರಿಗಳು ಹಾಗೂ ಮೆಂದಾರೆ ಗ್ರಾಮದವರ ಮೇಲೆ ಹಲ್ಲೆ ನಡೆಸಿ ಮತಗಟ್ಟೆ ಧ್ವಂಸ ಮಾಡಲಾಗಿತ್ತು. ಘಟನೆ ಸಂಬಂಧ 200ಕ್ಕೂ ಹೆಚ್ಚು ಜನರ ಮೇಲೆ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿದ್ದು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ 46 ಜನರು ಬಂಧಿತರಾಗಿದ್ದರು.
ನಂತರ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್ ಹಾಗೂ ಬೇಡಗಂಪಣ ಸಮಾಜದವರ ನೆರವಿನಿಂದ 46 ಜನರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲಾಯಿತು. ತಮ್ಮ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಾದ ನಂತರ ಕೆಲವರು ಭಯದಿಂದ ತಲೆಮರೆಸಿಕೊಂಡಿದ್ದರು. ಇಂಡಿಗನತ್ತ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು, ಇನ್ನಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಗ್ರಾಮದವರ ಸಭೆ ನಡೆಸಿ ಧೈರ್ಯ ತುಂಬಿದ್ದರು. ಇದೀಗ ಗ್ರಾಮಸ್ಥರು ಚುನಾವಣೆ ಸಂದರ್ಭದಲ್ಲಿ ಸಂಭವಿಸಿದ ಕಹಿ ಘಟನೆಯನ್ನು ಮರೆತು ಮತ್ತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಜಿಲ್ಲಾಡಳಿತಕ್ಕೆ ಕೊಂಚ ನೆಮ್ಮದಿ ತಂದಿದೆ. ಪಿಡಿಒ ಕಿರಣ್ ಮಾತನಾಡಿ, ಇಂಡಿಗನತ್ತ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಬುಧವಾರದಿಂದ 26 ಮಹಿಳೆಯರು ಹಾಗೂ 10 ಪುರುಷರು ಕೆಲಸಕ್ಕೆ ಬರುತ್ತಿದ್ದಾರೆ. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾರವರ ಸೂಚನೆಯಂತೆ ಜಾಬ್ ಕಾರ್ಡ್ ಹೊಂದಿರುವ ಗ್ರಾಮಸ್ಥರಿಗೆ ನೂರು ದಿನಗಳ ಕೆಲಸ ಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನರೇಗಾ ಕೂಲಿ ಕೆಲಸಕ್ಕೆ ಆಗಮಿಸಿದ್ದವರ ಪೈಕಿ ನ್ಯಾಯಾಂಗ ಬಂಧನದಿಂದ ಜಾಮೀನು ಪಡೆದು ಬಂದಿರುವ ಐವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದ್ದಾರೆ. ಮೆಂದಾರೆ ಗ್ರಾಮದವರೂ ಇಂಡಿಗನತ್ತ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಬರುವುದಾಗಿ ತಿಳಿಸಿದ್ದು, ಅವರಿಗೂ ನರೇಗಾದಡಿ ಕೆಲಸ ನೀಡಲಾಗುವುದು. – ಕಿರಣ್, ಪಿಡಿಒ





