Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹೋಬಳಿಗಳಲ್ಲಿನ ಸಿಸಿ ಕ್ಯಾಮೆರಾ ತೆರವುಗೊಳಿಸಿ; ರೈತರ ಪ್ರತಿಭಟನೆ

ತಿ. ನರಸೀಪುರ: ಗ್ರಾಮೀಣ ಪ್ರದೇಶದ ಹೋಬಳಿಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಯಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಬುಧವಾರ ಬನ್ನೂರಿನ ಸಂತೆ ಮಾಳದ ಸಿಸಿ ಕ್ಯಾಮೆರಾದ ಮುಂದೆ ರಸ್ತೆ ತಡೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಬನ್ನೂರು ಪಟ್ಟಣದ ಕಾವೇರಿ ವೃತ್ತ ಸಂತೆಮಾಳ, ತಿ. ನರಸೀಪುರ ಪಟ್ಟಣದಲ್ಲಿ ಸಿ. ಸಿ. ಕ್ಯಾಮೆರಾಗಳನ್ನು ಅಳವಡಿಸಿದ್ದು ಗ್ರಾಮೀಣ ಭಾಗದ ರೈತರು ದ್ವಿಚಕ್ರ ವಾಹನಗಳಲ್ಲಿ ತಮ್ಮ ಜಮೀನುಗಳಿಗೆ ಕೃಷಿ ಚಟುವಟಿಕೆ ನಡೆಸಲು, ಇನ್ನಿತರೆ ಕೆಲಸ ಕಾರ್ಯಗಳಿಗೆ ಪದೇ ಪದೇ ಹೆಲೈಟ್ ಧರಿಸಿ ಓಡಾಡಲು ಸಮಸ್ಯೆಯಾಗುತ್ತದೆ.

ಆದ್ದರಿಂದ ಸಿಸಿ ಕ್ಯಾಮೆರಾ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ರೈತರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಪೋಷಕರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ತರಕಾರಿ, ಹೂವು, ಹಣ್ಣು ಮಾರಾಟಗಾರರು ಹಳ್ಳಿಗಳಿಂದ ಬನ್ನೂರು, ತಿ. ನರಸೀಪುರ ಪಟ್ಟಣಗಳಿಗೆ ಪದೇ ಪದೇ ದ್ವಿಚಕ್ರ ವಾಹನಗಳ ಮೂಲಕ ಕೃಷಿ ಚಟುವಟಿಕೆ ಹಾಗೂ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಹಲವಾರು ಬಾರಿ ಓಡಾಡುತ್ತಿದ್ದು ಕ್ಯಾಮೆರಾಗಳ ಮೂಲಕ ಚಿತ್ರ ಸೆರೆಹಿಡಿದು, ಮೊಬೈಲ್‌ನಲ್ಲಿ ದಂಡ ಕಟ್ಟುವಂತೆ ನೋಟಿಸ್ ಕಳಿಸಲಾಗುತ್ತಿದೆ.

ಗ್ರಾಮೀಣ ಭಾಗದ ಬಡ ರೈತ ಕುಟುಂಬಗಳಿಗೆ ದಂಡದ ಹಣ ಕಟ್ಟಲು ತುಂಬಾ ಕಷ್ಟವಾಗುತ್ತಿದೆ ಎಂದು ದೂರಿದರು. ಸ್ಥಳೀಯ ರೈತರು ಹಾಗೂ ನಾಗರಿಕರಿಗೆ ಪ್ರತಿನಿತ್ಯ ಮೊಬೈಲ್ ಮೆಸೇಜ್ ಮೂಲಕ ೨೦೦ ರೂ. ನಿಂದ ೫೦೦ ರೂ. ವರೆಗೆ ದಂಡ ಕಟ್ಟಬೇಕು ಎಂದು ನೋಟಿಸ್ ಬರುತ್ತಿದ್ದು, ಈ ತನಕ ಒಬ್ಬೊಬ್ಬ ರೈತನಿಗೆ ೫, ೧೦, ೨೦ ಸಾವಿರದಿಂದ ೨೫ ಸಾವಿರ ರೂ. ವರೆಗೆ ಹಣ ಪಾವತಿಸಲು ನೋಟಿಸ್ ಜಾರಿಯಾಗಿದೆ. ರೈತರು ಈ ಹಣವನ್ನು ಎಲ್ಲಿಂದ ತಂದು ಕಟ್ಟಬೇಕು ಎಂದು ಪ್ರಶ್ನಿಸಿದರು. ರೈತರಿಗೆ ಮಾರಕವಾಗಿರುವ ಸಿಸಿ ಕ್ಯಾಮೆರಾಗಳನ್ನು ತೆರವುಗೊಳಿಸದಿದ್ದರೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸಹಸ್ರಾರು ರೈತರು ಹಾಗೂ ರೈತಪರ ಸಂಘಟನೆಗಳ ಆಶ್ರಯದಲ್ಲಿ ವಿಭಿನ್ನ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಅತ್ತಹಳ್ಳಿ ಸಿ. ಲಿಂಗಣ್ಣ, ಅರುಣ್ ಕುಮಾರ್, ಕೆಇಬಿ ನಂಜೇಗೌಡ, ಹನುಮನಾಳು ಸಿದ್ದೇಗೌಡ, ಲೋಕೇಶ್, ಶಿವರಾಜು, ಕುಂತನಹಳ್ಳಿ ಸ್ವಾಮಿ, ಕುಳ್ಳೇಗೌಡ, ಕಿರಗಸೂರು ಶಂಕರ್, ಕುರುಬೂರು ಸಿದ್ದೇಶ್, ಪ್ರದೀಪ್, ಮಂಜುನಾಥ್, ವರಕೋಡು ನಾಗೇಶ್ ಮತ್ತಿತರರು ಭಾಗವಹಿಸಿದ್ದರು.

ರೈತರು ಸಾಲ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿರುವ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಒಡ್ಡುತ್ತಿದೆ. ಸರ್ಕಾರ ಇತ್ತ ಗಮನಿಸಿ ಜನರಿಗೆ ಈಗಾಗಲೇ ರವಾನೆ ಮಾಡಿರುವ ದಂಡವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು. – ಅತ್ತಹಳ್ಳಿ ದೇವರಾಜ್

Tags: