Mysore
19
overcast clouds
Light
Dark

ಅಡಕತ್ತರಿಯಲ್ಲಿ ಸಿಲುಕಿದ ಖಾಸಗಿ ಬಡಾವಣೆಗಳು

ಅಧಿಕಾರಿಗಳ ತಪ್ಪಿನಿಂದ ಬೆಲೆ ತೆತ್ತುತ್ತಿರುವ ನಿವಾಸಿಗಳು

ಮುಡಾ ಬಡಾವಣೆಗಳ ಹಸ್ತಾಂತರ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಅಧಿಕಾರಿಗಳು

ವಿಜಯನಗರ ೪ನೇ ಹಂತ ಸೇರಿದಂತೆ ೩೧ ಖಾಸಗಿ ಬಡಾವಣೆಗಳ ಹಸ್ತಾಂತರವೂ ನನೆಗುದಿಗೆ

  • ಕೆ. ಬಿ. ರಮೇಶ ನಾಯಕ

ಮೈಸೂರು: ಮುಡಾದಿಂದ ಅನುಮೋದನೆ ಪಡೆದು ರಚನೆಯಾಗಿರುವ ಖಾಸಗಿ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಎದುರಾಗಿರುವುದರಿಂದ ಹಸ್ತಾಂತರ ಮಾಡಿಕೊಳ್ಳಲು ಸ್ಥಳೀಯ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮವಾಗಿ ಅಭಿವೃದ್ಧಿಪಡಿಸದ ಖಾಸಗಿ ಬಡಾವಣೆಗಳು ಅಕ್ಷರಶಃ ಅಡಕತ್ತರಿಯಲ್ಲಿ ಸಿಲುಕಿವೆ.

ಖಾಸಗಿ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸದೆ ಇದ್ದರೂ ಶೇ. ೧೦೦ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿರುವ ಮುಡಾ ಅಧಿಕಾರಿಗಳ ತಪ್ಪಿನಿಂದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಭರಿಸಬೇಕಾಗಿದೆ. ಇದರಿಂದ ಆದಾಯವಿಲ್ಲದೆ ಇರುವ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿ ಭಾರ ಇಳಿಸಿಕೊಳ್ಳುವ ಪ್ರಯತ್ನ ಸಫಲವಾಗಿಲ್ಲ.

ಇನ್ನು ಮುಡಾ ಬಡಾವಣೆಗಳನ್ನು ಹಸ್ತಾಂತರ ಮಾಡಿಕೊಳ್ಳುವ ಕುರಿತು ನಗರಸಭೆ, ಪಟ್ಟಣ ಪಂಚಾಯಿತಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೈಚೆಲ್ಲಿ ಕುಳಿತಿವೆ. ಖಾಸಗಿಯಾಗಿ ರಚನೆಯಾಗಿರುವ ಬಡಾವಣೆಗಳಿಗೆ ಸರ್ಕಾರ ದಿಂದಲೇ ಅನುದಾನ ಬಿಡುಗಡೆ ಮಾಡಿ ಮೂಲ ಸೌಕರ್ಯ ಕಲ್ಪಿಸಲು ವಾರ್ಷಿಕ ಅಂದಾಜು ೧೦೦ ಕೋಟಿ ರೂ. ನಷ್ಟು ಖರ್ಚು ಮಾಡುತ್ತಿರುವುದಕ್ಕೂ ಸರ್ಕಾರ ಕತ್ತರಿ ಹಾಕುವ ಸಾಧ್ಯತೆ ಇರುವುದರಿಂದ ನಿವೇಶನಗಳನ್ನು ಮಾರಿ ಲಾಭ ಮಾಡಿಕೊಂಡಿರುವವರಲ್ಲಿ ಈಗ ನಡುಕ ಶುರುವಾಗಿದೆ.

ಸಿಐಟಿಬಿಯು ಮುಡಾ ಆಗಿ ರೂಪುಗೊಂಡ ಬಳಿಕ ಲಲಿತಾದ್ರಿ ನಗರ(ಉತ್ತರ), ಲಲಿತಾದ್ರಿನಗರ(ದಕ್ಷಿಣ), ಶಾಂತವೇರಿಗೋಪಾಲಗೌಡ ನಗರ, ಲಾಲ್ ಬಹದ್ದೂರ್ ಶಾಸಿ ನಗರ, ವಸಂತನಗರ ಬಡಾವಣೆ, ಹಂಚ್ಯಾ-ಸಾತಗಳ್ಳಿ ಎ ಮತ್ತು ಬಿ ವಲಯ ಬಡಾವಣೆ, ಸಾತಗಳ್ಳಿ ಎರಡನೇ ಹಂತ ಬಡಾವಣೆ, ದೇವನೂರು ಮೂರನೇ ಹಂತದ ಬಡಾವಣೆ, ವಿಜಯನಗರ ನಾಲ್ಕನೇ ಹಂತ, ಒಂದನೇ ಘಟ್ಟ, ಎರಡನೇ ಮತ್ತು ಮೂರನೇ ಘಟ್ಟ, ರವೀಂದ್ರನಾಥ್ ಠ್ಯಾಗೂರ್ ಬಡಾವಣೆ, ನಾಚನಹಳ್ಳಿ-ಕುಪ್ಪಲೂರು ಮೂರನೇ ಹಂತದ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಉಳಿದಂತೆ ರಿಂಗ್ ರಸ್ತೆಯಲ್ಲಿ ೧,೫೦೦ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳನ್ನು ರಚಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

ಜಯಪುರ, ಬನ್ನೂರು, ನಂಜನಗೂಡು ಹಾಗೂ ಹುಣಸೂರು ಮಾರ್ಗಗಳಲ್ಲಿ ಮುಡಾದಿಂದ ಅನುಮೋ ದನೆ ಪಡೆದು ರಚಿಸಿರುವ ಖಾಸಗಿ ಬಡಾವಣೆ ಗಳು ಕಣ್ಣಿಗೆ ಕಾಣುವಷ್ಟು ಸಿಗುತ್ತವೆ. ಈಗಾಗಲೇ ಮೂಲ ಸೌಕರ್ಯದ ನಿರೀಕ್ಷೆ ಇಟ್ಟುಕೊಂಡು ಮನೆಗಳನ್ನು ನಿರ್ಮಿಸಿ ವಾಸಿಸುತ್ತಿರುವ ನಿವಾಸಿಗಳ ಗೋಳು ಮಾತ್ರ ಹೇಳತೀರದಾಗಿದೆ.

ಹಸ್ತಾಂತರವಾದ ಮುಡಾ ಬಡಾವಣೆಗಳು:
ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳನ್ನು ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಹಸ್ತಾಂತರಿಸಲು ಮುಡಾದ ಸಭೆಯಲ್ಲಿ ತೀರ್ಮಾನಿಸಿದ್ದರೂ ಸರ್ಕಾರದಿಂದ ಒಪ್ಪಿಗೆ ದೊರೆತಿಲ್ಲ. ಹಸ್ತಾಂತರವಾಗುವ ಬಡಾವಣೆಗಳನ್ನು ಸೇರಿಸಿಕೊಳ್ಳಲು ಸರ್ಕಾರದ ಅನುಮೋದನೆ ಕೋರಿ ಬರೆದಿರುವ ಪತ್ರಕ್ಕೆ ಈತನಕ ಯಾವುದೇ ಉತ್ತರ ಬಂದಿಲ್ಲ.

ಸಾತಗಳ್ಳಿ ಎರಡನೇ ಹಂತ, ಸಾತಗಳ್ಳಿ ಬಿ ವಲಯ, ವಸಂತ ನಗರ ಬಡಾವಣೆಗಳನ್ನು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ, ಶಾಂತವೇರಿ ಗೋಪಾಲಗೌಡ ನಗರ ಬಡಾವಣೆಯನ್ನು ಕಡಕೊಳ ಪಟ್ಟಣ ಪಂಚಾಯಿತಿಗೆ, ಲಲಿತಾದ್ರಿ ನಗರ ದಕ್ಷಿಣ ಮತ್ತು ಉತ್ತರ ಬಡಾವಣೆ, ಲಾಲ್ ಬಹದ್ದೂರ್ ಶಾಸಿನಗರ ಬಡಾವಣೆಯನ್ನು ಕಡಕೊಳ ಪಟ್ಟಣ ಪಂಚಾಯಿತಿಗೆ, ವಿಜಯನಗರ ನಾಲ್ಕನೇ ಹಂತ, ಒಂದನೇ, ಎರಡನೇ ಮತ್ತು ಮೂರನೇ ಘಟ್ಟ ಬಡಾವಣೆಯನ್ನು ಹೂಟಗಳ್ಳಿ ನಗರಸಭೆಗೆ ಸೇರಿಸುವ ಪ್ರಸ್ತಾಪಕ್ಕೆ ಅನುಮೋದನೆ ದೊರೆತಿಲ್ಲ. ಈಗಾಗಲೇ ಮುಡಾದಿಂದ ಹಸ್ತಾಂತರ ಮಾಡಲು ನಿರ್ಣಯ ಮಾಡಿ ಆಯಾಯ ಸಂಸ್ಥೆಗಳಿಗೆ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದರೂ ಸರ್ಕಾರದ ಗ್ರೀನ್ ಸಿಗ್ನಲ್‌ಗೆ ಅಧಿಕಾರಿಗಳು ಕಾದು ಕುಳಿತಿದ್ದಾರೆ.

ಅಡಕತ್ತರಿಯಲ್ಲಿ ಸಿಲುಕಿಕೊಂಡ ಖಾಸಗಿ ಬಡಾವಣೆಗಳು:
ಅಭಿವೃದ್ಧಿಪಡಿಸದೆ ರಚನೆಯಾಗಿರುವ ಖಾಸಗಿ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ನಿವಾಸಿಗಳಿಂದ ತೀವ್ರ ಒತ್ತಡ ಬರುತ್ತಿದ್ದರೂ ಅಭಿವೃದ್ಧಿ ಕೆಲಸ ಮಾಡಲು ದುಡ್ಡಿಲ್ಲ ಎನ್ನುತ್ತಿರುವ ನಗರಸಭೆ, ಪಟ್ಟಣ ಪಂಚಾಯಿತಿಗಳು ಹಸ್ತಾಂತರ ಮಾಡಿಕೊಳ್ಳಲು ಮೀನಮೇಷ ಎಣಿಸುತ್ತಿರುವುದರಿಂದ ಅಡಕತ್ತರಿಯಲ್ಲಿ ಸಿಲುಕಿವೆ. ಮುಡಾದಿಂದ ನಿ ಎರಡರಲ್ಲಿ ಖರ್ಚು ಮಾಡು ವುದಕ್ಕೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ, ಹಸ್ತಾಂತರವಾಗುವ ಬಡಾವಣೆಗಳಿಂದ ಸಂಗ್ರಹವಾಗಿರುವ ತೆರಿಗೆಯನ್ನು ಭರಿಸುವಂತೆ ಪಟ್ಟು ಹಿಡಿದಿವೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ ನಿರ್ವಹಣೆ ಮಾಡುವುದಕ್ಕೆ ಅನುದಾನದ ಕೊರತೆ ಇದೆ. ಹೊಸದಾಗಿ ಪಟ್ಟಣ ಪಂಚಾಯಿತಿ, ನಗರಸಭೆಯಾಗಿ ರಚನೆಯಾಗಿರುವ ಕಾರಣ ಹೊಸ ತೆರಿಗೆ ಬಿಟ್ಟರೆ ಬೇರೆ ಸಂಪನ್ಮೂಲ ಇಲ್ಲ. ಇದರಿಂದಾಗಿ ಕನಿಷ್ಠ ೩ ವರ್ಷಗಳ ಕಾಲದಿಂದ ಸಂಗ್ರಹಿಸಿರುವ ಅಭಿವೃದ್ಧಿ ತೆರಿಗೆ ಮತ್ತು ನಿವೇಶನದಾರರಿಂದ ಕಟ್ಟಿಸಿಕೊಂಡಿರುವ ತೆರಿಗೆ ಯನ್ನು ಪಾವತಿಸುವಂತೆ ಹೇಳಿಕೊಂಡು ಕುಳಿತಿದ್ದಾರೆ.

ಇದೇ ಅಂಶವನ್ನು ಸರ್ಕಾರದ ಗಮನಕ್ಕೂ ತಂದಿರುವ ಪರಿಣಾಮ ಯಾವ ನಿರ್ಧಾರಕ್ಕೂ ಬರಲಾಗದೆ ಹೋಗಿರುವುದರಿಂದ ನಿವಾಸಿಗಳು ಜನಪ್ರತಿನಿಧಿಗಳ ಮನೆ ಎದುರು ಹೋಗಿ ನಿಲ್ಲುವಂತಾಗಿದೆ.

ವಿಜಯನಗರ ೪ನೇ ಹಂತ ಸೇರಿದಂತೆ ೩೧ ಖಾಸಗಿ ಬಡಾವಣೆಗಳನ್ನು ಹಸ್ತಾಂತರ ಮಾಡಿಕೊಳ್ಳುವಂತೆ ಮುಡಾದಿಂದ ಪ್ರಸ್ತಾವನೆ ಬಂದಿದ್ದರೂ ಸರ್ಕಾರದ ಗಮನಕ್ಕೆ ಕಳುಹಿಸಲಾಗಿದೆ. ಮೂಲ ಸೌಕರ್ಯ ಕಲ್ಪಿಸಲು ಅನುದಾನದ ಅಗತ್ಯ ಇರುವುದರಿಂದ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
ಚಂದ್ರಶೇಖರ್, ಪೌರಾಯುಕ್ತರು, ಹೂಟಗಳ್ಳಿ ನಗರಸಭೆ.

ಮುಡಾ ಬಡಾವಣೆ, ಖಾಸಗಿ ಬಡಾವಣೆಗಳನ್ನು ಹಸ್ತಾಂತರ ಮಾಡಿಕೊಳ್ಳುವಂತೆ ಹೇಳಿದ್ದರೂ ಅಽಕೃತವಾಗಿ ನಮಗೆ ಹಸ್ತಾಂತರವಾಗಿಲ್ಲ. ಕೆಲವು ಬಡಾವಣೆಗಳಿಂದ ಕಸ ಸಂಗ್ರಹಣೆ ಮಾಡುತ್ತಿದ್ದೇವೆ. ಮೂಲ ಸೌಕರ್ಯ ಕಲ್ಪಿಸಲು ಅನುದಾನದ ಅಗತ್ಯವಿದೆ. ?
ದೀಪಾ, ಮುಖ್ಯಾಧಿಕಾರಿ, ಕಡಕೊಳ ಪಟ್ಟಣ ಪಂಚಾಯಿತಿ