Mysore
33
few clouds

Social Media

ಬುಧವಾರ, 25 ಮಾರ್ಚ್ 2026
Light
Dark

ಸ್ವಚ್ಛ ನಗರಿಯ ಕೊಳಚೆ ಮುಖ

ಮೋರಿ ವಾಸನೆಯಿಂದ ಕುರುಬಾರಹಳ್ಳಿ ವಾಸಿಗಳ ಪರಿತಾಪ

ಕೆ.ಎಸ್.ಚಂದ್ರಶೇಖರ್ ಮೂರ್ತಿ

ಮೈಸೂರು : ರಸ್ತೆಯಲ್ಲಿ ಕಿರಿದಾದ ಮೋರಿಗಳು, ಒಳಚರಂಡಿ ನೀರು ಮೋರಿಗಳಲ್ಲಿ ಹರಿಯಲು ಸಾಧ್ಯವಾಗದೆ ರಸ್ತೆಯ ಕಡೆಗೆ ಕಣ್ಣು ಹಾಯಿಸಿದೆ.. ಈ ದೃಶ್ಯ ಕಂಡು ಬಂದದ್ದು ಕೃಷ್ಣರಾಜ ವಿಧಾನ ಕ್ಷೇತ್ರ ವ್ಯಾಪ್ತಿಗೆ ಬರುವ ಕುರುಬಾರಹಳ್ಳಿ ಬಡಾವಣೆಯಲ್ಲಿ…

ಕುರುಬಾರಹಳ್ಳಿಯ ವಾರ್ಡ್‌ 2ನೇ ಅಡ್ಡರಸ್ತೆಯಲ್ಲಿ ಕೂರುವುದಿರಲಿ ತಿರುಗಾಡಬೇಕಾದರೂ ಮೂಗು ಮುಚ್ಚಿಕೊಂಡು ಹೋಗಬೇಕು. ಅಷ್ಟರ ಮಟ್ಟಿಗೆ ಇಲ್ಲಿನ ರಸ್ತೆ, ಮೋರಿಗಳು ಗಬ್ಬು ನಾರುತ್ತಿವೆ. ಒಳಚರಂಡಿಯಲ್ಲಿ ನೀರು ತುಂಬಿ ರಸ್ತೆಗೆ ಬರಲು ಸಿದ್ಧವಾಗಿದೆ. ಬಡಾವಣೆಯಲ್ಲಿ ಹಿರಿಯ ನಾಗರಿಕರು, ಮಕ್ಕಳು ಹೆಚ್ಚಾಗಿದ್ದಾರೆ. ದುರ್ವಾಸನೆ ಇದ್ದರೂ ಜನರು ಅನಿವಾರ್ಯವಾಗಿ ಅಲ್ಲಿ ಬದುಕುತ್ತಿದ್ದಾರೆ. ಇಲ್ಲಿನ ಬಹುತೇಕ ನಿವಾಸಿಗಳು ಬಡ ಮಧ್ಯಮವರ್ಗದವರಾಗಿದ್ದು, ಆಟೋ ಡ್ರೈವರ್‌ಗಳು, ದಿನಗೂಲಿ ಕುಟುಂಬಗಳವರೇ ಹೆಚ್ಚು ವಾಸ ಮಾಡುತ್ತಿದ್ದಾರೆ.

ಸಾವಿರಾರು ಬಡ ಜನರು ವಾಸ ಮಾಡುತ್ತಿರುವ ಈ ರಸ್ತೆಯಲ್ಲಿ ಒಳಚರಂಡಿ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದೆ. ಈ ಒಳಚರಂಡಿ ಅವ್ಯವಸ್ಥೆಗೆ ಪ್ರಮುಖ ಕಾರಣ ಅಂದರೆ ಅದೇ ರಸ್ತೆಯಲ್ಲಿ ಕೆಲವರು ಹಸುಗಳನ್ನು ಸಾಕುತ್ತಿರುವುದು. ಹಸು ಸಾಕಿದ್ದಾರೆ ಅನ್ನೋ ಕಾರಣಕ್ಕೆ ಈ ಒಳಚರಂಡಿ ಅವ್ಯವಸ್ಥೆಯಿಂದ ಕೂಡಿಲ್ಲ. ಈ ಹಸು ಸಾಕಿರುವವರು ಸಗಣಿಯನ್ನು ನೇರವಾಗಿ ಮೋರಿಯೊಳಗೆ ಹಾಕುತ್ತಿದ್ದಾರೆ. ಇದರಿಂದ ಮೋರಿ ನೀರಿನ ಜೊತೆ ಸಗಣಿ ಮಿಶ್ರಣವಾಗಿ ಮೋರಿ ನೀರು ಸಂಪೂರ್ಣವಾಗಿ ಹರಿಯಲಾಗದೆ ಸ್ಥಗಿತಗೊಂಡು, ಗಬ್ಬು ನಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಲ್ಲಿನ ಜನರು ತಮ್ಮ ಮನೆಯ ಕಿಟಕಿಯನ್ನು ಕೂಡ ತೆಗೆಯಲಾಗದಷ್ಟು ವಾಸನೆಯನ್ನು ಸಹಿಸಿಕೊಂಡು ಜೀವನ ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಡಾಂಬರು ಹಾಕಿದ ರಸ್ತೆಯಲ್ಲಿ ಪೈಪ್ ಲೈನ್ ಅಳವಡಿಸುವಾಗ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟು, ಇದೀಗ ಈ ಮೋರಿ ನೀರು ಕೂಡ ರಸ್ತೆಗೆ ಬಂದು ಇಡೀ ರಸ್ತೆ ಅವ್ಯವಸ್ಥೆಯಾಗಿದೆ. ಅಲ್ಲಲ್ಲಿ ಮೋರಿ ಸ್ವಚ್ಚ ಮಾಡಿದರೂ ಹೊರತೆಗೆದಿರುವ ಹೂಳನ್ನು ಅಲ್ಲೇ ರಸ್ತೆ ಬದಿಯಲ್ಲಿಯೇ ಉಳಿಸಲಾಗಿದೆ. ಮಳೆ ಬಂದಾಗ ಮತ್ತೆ ಮಣ್ಣು ಚರಂಡಿಯೊಳಗೆ ಸೇರಿಕೊಳ್ಳುತ್ತದೆ. ದುರವಸ್ತೆಯಿಂದ ಯಾವಾಗ ಪಾರಾಗುತ್ತೇವೆ, ಯಾರು ನಮ್ಮನ್ನು ಪಾರು ಮಾಡುತ್ತಾರೆ ಎಂಬುದು ಸ್ಥಳೀಯರ
ಅಳಲು.

15 ವರ್ಷದಿಂದ ಕುರುಬಾರಹಳ್ಳಿಯಲ್ಲಿ ವಾಸ ಮಾಡುತ್ತಿದ್ದೇನೆ. ಇಲ್ಲಿ ರಸ್ತೆ, ಮೋರಿ ಸರಿ ಇಲ್ಲ. ಹೇಳೋರು ಕೇಳೋರು ಇಲ್ಲ. ಮೋರಿ ನೀರು ಮನೆಯ ಶೌಚಾಲಯದ ಒಳಗೇ ಬರುತ್ತಿದೆ. ಸಗಣಿ ಕಸ, ಕಡ್ಡಿ ತುಂಬಿ ದುರ್ನಾತ ಬರುತ್ತಿದೆ. ನಾವು ಇಲ್ಲಿ ಮೂಗು, ಬಾಯಿ ಮುಚ್ಚಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮ ಕಷ್ಟವನ್ನು ಹೇಳಿಕೊಳ್ಳಲು ಯಾರೂ ಇಲ್ಲಿಗೆ ಬರುತ್ತಿಲ್ಲ. ಶಾಸಕ ಟಿ.ಎಸ್.ಶ್ರೀವತ್ಸ ಅವರು ಈ ಕಡೆ ಒಂದಿನವೂ ಬಂದಿಲ್ಲ.  ಗೀತಾ, ಕುರುಬಾರಹಳ್ಳಿ ನಿವಾಸಿ

ಮೋರಿಗಳಲ್ಲಿ ಗಲೀಜು ಎತ್ತೋದಕ್ಕೆ ಕಾರ್ಪೊರೇಷನ್‌ನಿಂದ ಯಾರೂ ಬರುವುದಿಲ್ಲ. ಈ ವಾಸನೆಯಲ್ಲಿ ಹೇಗೆ ಊಟ ಮಾಡೋದು. ಈ ವಾಸನೆ ಸೊಳ್ಳೆಗಳಿಂದ ಗಬ್ಬುನಾತದಿಂದ ಆರೋಗ್ಯ ತೊಂದರೆಯಾಗಿ ಮೂರು ಸಾವಿರ ಖರ್ಚು ಮಾಡಿದ್ದೇನೆ. ನನಗೆ ದುಡಿದು ಕೊಡುವವರು ಯಾರೂ ಇಲ್ಲ. ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಈ ಹೊನ್ನಮ್ಮ, ಕುರುಬಾರಹಳ್ಳಿ ನಿವಾಸಿ

ಇಲ್ಲಿ ಯಾವುದೇ ಸ್ವಚ್ಛತೆ ಕೆಲಸ ಆಗುತ್ತಿಲ್ಲ. ಮೋರಿ ಸಮಸ್ಯೆ ಇಲ್ಲಿ ದಶಕಗಳಿಂದ ಇದೆ. ಮೋರಿ ಕಸ ತೆಗೆಯೋದೇ ಇಲ್ಲ. ಪ್ರತಿಬಾರಿ ನಾವೇ ಕರೆ ಮಾಡಿ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕ್ಕಮಕ್ಕಳು, ವಯಸ್ಸಾದವರು ಹೆಚ್ಚಾಗಿದ್ದಾರೆ. ಮೋರಿ ನೀರು ತುಂಬಿ ಮನೆ ಬಾಗಿಲು ಮುಂದೆ ನಿಲ್ಲುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಕಾಲರಾ ರೋಗಕ್ಕೆ ತುತ್ತಾಗುವ ಭಯ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ಈ ಸಮಸ್ಯೆಯಿಂದ ನಮ್ಮನ್ನು ಮುಕ್ತಿಗೊಳಿಸಬೇಕು. • ಕಿರಣ್ ಕುಮಾರ್, ಕುರುಬಾರಹಳ್ಳಿ ನಿವಾಸಿ

Tags:
error: Content is protected !!