Mysore
16
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಆಹಾರ ಮೇಳ: ಮಳಿಗೆಗಳ ಬಾಡಿಗೆ ಕಡಿತಕ್ಕೆ ಆಗ್ರಹ

ಮೈಸೂರು: ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಆಹಾರ ಮೇಳದ ಮಳಿಗೆಗಳ ಬಾಡಿಗೆ ದರ ಕಡಿಮೆ ಮಾಡುವಂತೆ ಮೈಸೂರು ದಸರಾ ಆಹಾರ ಮೇಳದ ತಿಂಡಿ-ತಿನಿಸುಗಳ ಮಾರಾಟಗಾರರ ಸಂಘ, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಾಗರಾಜು ಎಸ್. ಸಿದ್ದರಾಮನಹುಂಡಿ ಅವರು, ಕಳೆದ ಬಾರಿ ರಾಜ್ಯದಲ್ಲಿ ಬರ ವಿದ್ದ ಹಿನ್ನೆಲೆಯಲ್ಲಿ ಆಹಾರ ಮಳಿಗೆಗಳ ಬಾಡಿಗೆಯನ್ನು ಸಸ್ಯಾಹಾರಿ ವಿಭಾಗದಲ್ಲಿ ೫೯,೦೦೦ ರೂ. , ಮಾಂಸಾಹಾರಿ ವಿಭಾಗದ ಮಳಿಗೆಗೆ ೮೮,೫೦೦ ರೂ. ಜೊತೆಗೆ ಜಿಎಸ್‌ಟಿಯನ್ನು ನಿಗದಿಪಡಿಸಲಾಗಿತ್ತು. ಈ ಪರಿಣಾಮ ವ್ಯಾಪಾರ ಸ್ಥರು ನಷ್ಟ ಅನುಭವಿಸಬೇಕಾಯಿತು. ಹಾಗಾಗಿ ಈ ಬಾರಿ ಸಸ್ಯಾಹಾರಕ್ಕೆ ೨೫,೦೦೦ ರೂ. , ಮಾಂಸಾಹಾರಕ್ಕೆ ೩೦,೦೦೦ ರೂ. ಗಳನ್ನು ಜಿಎಸ್‌ಟಿ ರಹಿತವಾಗಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

೪೦ ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿ ದಸರಾ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರವು, ಅತ್ಯಂತ ಹೆಚ್ಚು ಜನರನ್ನು ಆಕರ್ಷಿಸುವ ಆಹಾರ ಮೇಳದಲ್ಲಿ ಸಸ್ಯಾ ಹಾರಕ್ಕೆ ೨೫,೦೦೦ ರೂ. , ಮಾಂಸಾ ಹಾರಕ್ಕೆ ೩೦,೦೦೦ ರೂ. ಗಳನ್ನು ಜಿಎಸ್‌ಟಿ ರಹಿತವಾಗಿ ಮಳಿಗೆಗಳಿಗೆ ನಿಗದಿಪಡಿಸುವ ಮೂಲಕ ವ್ಯಾಪಾರ ಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ಬಾರಿ ೧೭೫ ಮಳಿಗೆಗಳನ್ನು ಒಂದೇ ಕಡೆ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಆದರೆ, ಪಾರ್ಕಿಂಗ್ ಸಮಸ್ಯೆಗಳು ಉದ್ಭವವಾಗಲಿದೆ. ಆದ್ದರಿಂದ ಈ ಬಾರಿ ಜಂಬೋ ಸರ್ಕಸ್ ನಡೆಯದಿರುವುದರಿಂದ ಆಹಾರ ಮೇಳವನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ೧೨೫ ಮಳಿಗೆಗಳು ಮತ್ತು ಇಟ್ಟಿಗೆಗೂಡಿನ ಕಾರಂಜಿ ಕೆರೆ ಪಕ್ಕದ ಮೈದಾನದಲ್ಲಿ ೫೦ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಿಗಳು ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿ ಕೊಂಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಕಂಸಾಳೆ ರವಿ, ಉಪಾಧ್ಯಕ್ಷೆ ಶಾಂತಮ್ಮ, ಶಿವಸಿದ್ದು, ಬೀರೇಶ್, ಸಂತೋಷ್ ಮತ್ತಿತರರು ಹಾಜರಿದ್ದರು.

ಇಟ್ಟಿಗೆಗೂಡಿನ ಕಾರಂಜಿ ಕೆರೆ ಪಕ್ಕದ ಮೈದಾನವು ಅರಮನೆಯ ಸುಪರ್ದಿಯಲ್ಲಿ ಇರುವುದರಿಂದ ಇದನ್ನು ಆಹಾರ ಮೇಳಕ್ಕೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತ್ತು ಸಂಸದ ಯದುವೀರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ. -ನಾಗರಾಜು ಎಸ್. ಸಿದ್ದರಾಮನಹುಂಡಿ

* ಈ ಬಾರಿಯ ದಸರಾ ಮಹೋತ್ಸವ ಅಧಿಕಾರಿಗಳ ದಸರಾ ಆಗಬಾರದು.

* ದಸರಾ ಉಪ ಸಮಿತಿಗಳನ್ನು ಮುಂಚಿತವಾಗಿ ನೇಮಕ ಮಾಡಬೇಕು.

* ಅಧಿಕಾರಿಗಳು ಸಭೆ ನಡೆಸುವಾಗ ಸಂಘದವರಿಗೆ ಆಹ್ವಾನ ನೀಡಿ ಮುಕ್ತವಾಗಿ ಚರ್ಚಿಸಬೇಕು.

* ಆಹಾರ ಮೇಳದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.

* ಹೊರ ಜಿಲ್ಲೆ, ರಾಜ್ಯಗಳ ವ್ಯಾಪಾರಸ್ಥರಿಗೂ ಅವಕಾಶ ನೀಡಬೇಕು.

 

Tags:
error: Content is protected !!