Mysore
26
haze

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಇಂದಿನಿಂದ ಕಾರು ರ‍್ಯಾಲಿ ಚಾಂಪಿಯನ್‌ ಶಿಪ್‌

ಕಾಫಿ ತೋಟಗಳಲ್ಲಿ ದೊಳೆಬ್ಬಿಸಿ ಕಾರು ಚಲಾಯಿಸಲಿರುವ ರ‍್ಯಾಲಿಪಟುಗಳು

ಕೃಷ್ಣ ಸಿದ್ದಾಪುರ
ಸಿದ್ದಾಪುರ: ಬ್ಲೂ ಬ್ಯಾಂಡ್, ಎಫ್‌ಎಂಎಸ್ ಸಿಐ, ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದೊಂದಿಗೆ ರೋಬಸ್ಟಾ ೨೦೨೪ ರ‍್ಯಾಲಿ ಚಾಂಪಿಯನ್‌ಶಿಪ್‌ಗೆ ಅಮ್ಮತಿಯಲ್ಲಿ ಕ್ಷಣಗಣನೆ ಶುರುವಾಗಿದೆ.

ನ. ೨೨ರಿಂದ ನ. ೨೪ರವರೆಗೆ ರ‍್ಯಾಲಿ ನಡೆಯ ಲಿದ್ದು, ಶುಕ್ರವಾರ ಸಂಜೆ ಅಮ್ಮತ್ತಿ ಪ್ರೌಢಶಾಲೆ ಮೈದಾನದಲ್ಲಿ ಕೊಡಗಿನ ಸಂಪ್ರದಾಯದ ಬೊಳ ಕಾಟ್ ಪ್ರದರ್ಶನದೊಂದಿಗೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗಣ್ಯರು ಕಾರು ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಹಸಿರು ಸಿರಿ ಮೇಲೆ ಕೆಂಬಣ್ಣ ಎರಚಿದಂತೆ ಕಾಫಿ ಹಣ್ಣುಗಳಿಂದ ತೂಗಾಡುತ್ತಿರುವ ಗಿಡಗಳು ಮತ್ತು ಹಚ್ಚಹಸಿರು ಹೊದ್ದು, ಮುಗಿಲು ಚುಂಬಿಸುವಂತಿರುವ ಮರ-ಗಿಡಗಳ ನಡುವೆ ಕಾರು ಓಡಿಸಲು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಪಾಂಡಿಚೆರಿ, ಗೋವಾ, ಪುಣೆ, ಚಂಡಿಗಡ್, ಕೊಲ್ಕತ್ತಾ, ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು ೬೧ಕ್ಕೊ ಹೆಚ್ಚು ಪಟುಗಳು ಕಾತರರಾಗಿದ್ದಾರೆ.

ಬಣ್ಣ ಬಣ್ಣದ, ಶಕ್ತಿಶಾಲಿ ಕಾರುಗಳು ಮತ್ತು ಚಾಂಪಿಯನ್ ಚಾಲಕರು ಬಂದು, ಆನಂದಪುರ, ಪಾಲಿಬೆಟ್ಟ, ಎಮ್ಮೆಗುಂಡಿ, ಹೊಸಳ್ಳಿ, ಮಾರ್ಗೊಳ್ಳಿ, ಸುತ್ತಮುತ್ತಲ ಟಾಟಾ ಸಂಸ್ಥೆಯ ಕಾಫಿ ತೋಟಗಳ ಕಡಿದಾದ ಕಿರಿದಾದ ರಸ್ತೆಯಲ್ಲಿ ಕಾರು ಚಲಾಯಿಸಲಿದ್ದಾರೆ. ರ‍್ಯಾಲಿಯ ರಸದೌತಣವನ್ನು ಉಣಬಡಿಸಲು ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಶುಕ್ರವಾರ ಸಂಜೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್, ಗಣ್ಯರು ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಲಿದ್ದಾರೆ. ಭಾನುವಾರ ಸಂಜೆ ಶಾಲಾ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶನಿವಾರ ಬೆಳಿಗ್ಗೆ ೮ ಗಂಟೆಯಿಂದಲೇ ಆನಂದಪುರ ಹಾಗೂ ಪಾಲಿಬೆಟ್ಟ ಎಮ್ಮೆಗುಂಡಿ, ತೋಟಗಳ ರಸ್ತೆಗಳಲ್ಲಿ ರ‍್ಯಾಲಿ ಪ್ರಾರಂಭವಾಗಲಿದೆ.

ಭಾನುವಾರ ಬೆಳಿಗ್ಗೆ ೬ ಗಂಟೆಯಿಂದ ಹೊಸಹಳ್ಳಿ, ಮಾರ್ಗೊಳ್ಳಿ, ಟಾಟಾ ಸಂಸ್ಥೆಯ ತೋಟದ ಸುತ್ತಮುತ್ತ ರ‍್ಯಾಲಿ ನಡೆಯಲಿದೆ. ಒಟ್ಟು ೧೧೧ ಕಿ. ಮೀ. ದೂರವನ್ನು ರ‍್ಯಾಲಿಪಟುಗಳು ಕ್ರಮಿಸಲಿದ್ದಾರೆ. ರ‍್ಯಾಲಿಯಲ್ಲಿ ಮಹಿಳಾ ಸ್ಪಽಗಳು ಹಾಗೂ ಪುರುಷ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ನಾ.. . ಮುಂದು ತಾ. . . ಮುಂದು ಎಂಬಂತೆ ರ‍್ಯಾಲಿಪಟುಗಳು ಭಾರಿ ಸದ್ದು ಮಾಡುವ ಮೂಲಕ ಹರಸಾಹಸದಿಂದ ತಮ್ಮ ವಾಹನಗಳನ್ನು ಚಾಲನೆ ಮಾಡಲಿದ್ದಾರೆ.

ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ಐದನೇ ಸುತ್ತು ಇದಾಗಿದ್ದು, ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದೊಂದಿಗೆ ಕೊಡಗಿನಲ್ಲಿ ನಡೆಯುತ್ತಿರುವ ೨ನೇ ವರ್ಷದ ಕಾರು ರ‍್ಯಾಲಿ ಇದೀಗ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಈ ರ‍್ಯಾಲಿಗೆ ಹೆಚ್ಚು ಪ್ರೇಕ್ಷಕರು ಬರುತ್ತಾರೆ.

೨೦ ದಿನಗಳಿಂದಲೂ ಕಾಫಿ ತೋಟದ ಕಡಿದಾದ ಮಣ್ಣಿನ ರಸ್ತೆಯನ್ನು ಮೂರು ಜೆಸಿಬಿ ಮುಖಾಂತರ ಯಾವುದೇ ತೊಂದರೆ ಹಾಗೂ ಅಪಘಾತ ಉಂಟಾಗದಂತೆ ಉತ್ತಮವಾಗಿ ನಿರ್ಮಿಸಿ ಎಲ್ಲ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ. ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್ ರ‍್ಯಾಲಿಯು ೧೯೮೮ರಿಂದ ಚಾಂಪಿಯನ್‌ಶಿಪ್ ಮಾದರಿಯಲ್ಲಿ ನಡೆಸಿಕೊಂಡು ಬರಲಾಗಿದೆ.

ಕೊಡಗಿನಲ್ಲಿ ೨೦೧೩ರಲ್ಲಿ ನಡೆದ ರ‍್ಯಾಲಿಯ ನಂತರ ಯಾವುದೇ ರ‍್ಯಾಲಿ ನಡೆದಿಲ್ಲ. ನಂತರ ೨೦೨೩ರಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಈ ರ‍್ಯಾಲಿಗೆ ಮರುಜೀವ ನೀಡಿ ಉತ್ತಮ ರೀತಿಯಲ್ಲಿ ಎರಡನೇ ವರ್ಷಕ್ಕೆ ನಡೆಸಿಕೊಂಡು ಬರುತ್ತಿದೆ.

ಈ ವರ್ಷದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ನಾಲ್ಕು ಆವೃತ್ತಿಗಳು ಚೆನ್ನ್ತ್ಯೈ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಹೈದರಾಬಾದ್‌ನಲ್ಲಿ ನಡೆದಿದ್ದು, ಐದನೇ ಆವೃತ್ತಿ ಕೊಡಗಿನಲ್ಲಿ ನಡೆಯುತ್ತಿದೆ. ಕೊನೆಯ ಆರನೇ ಆವೃತ್ತಿ ತುಮಕೂರಿನಲ್ಲಿ ನಡೆಯಲಿದೆ. ಎಲ್ಲ ವಿಜೇತರು ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಆರು ಆವೃತ್ತಿಯಲ್ಲಿ ಹೆಚ್ಚು ಅಂಕ ಪಡೆದವರು ಈ ವರ್ಷದ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.

ಈ ವರ್ಷ ಎಂಆರ್‌ಎಫ್‌ನ ೬ ಬಾರಿ ಹಾಲಿ ಚಾಂಪಿಯನ್ ಆದ ದಿಲ್ಲಿಯ ಗೌರವ್ ಗಿಲ್ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಹಾಗೂ ಹರಿಕೃಷ್ಣ ವಾಡಿಯರ್, ಮಹಿಳಾ ಸ್ಪಽಗಳಾದ ಪವಿತ್ರ ಗೌಡ, ಪುಣೆಯ ನಿಖಿತ ಟಕಾಲೆ, ಹರ್ಷಿತಾ ಗೌಡ, ಅನುಷಿ ಚಾಂಪಿಯನ್‌ಗಾಗಿ ತೀವ್ರ ಪೈಪೋಟಿಯೊಡ್ಡಲಿದ್ದಾರೆ.

 

Tags:
error: Content is protected !!