Mysore
16
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

26 ಬಗೆಯ ಅಭಿಷೇಕಗಳಲ್ಲಿ ಮಿಂದೆದ್ದ ಬಾಹುಬಲಿ

ಶ್ರೀ ಕ್ಷೇತ್ರ ಗೊಮ್ಮಟಗಿರಿಯ ಬಾಹುಬಲಿ ಮೂರ್ತಿಗೆ ೭೫ನೇ ಮಹಾ ಮಸ್ತಕಾಭಿಷೇಕ ಜಲ, ಎಳನೀರು, ಅರಿಶಿನ, ಚಂದನ, ಕ್ಷೀರ, ಶ್ರೀಗಂಧದಲ್ಲಿ ಅಭಿಷೇಕ; ವಿವಿಧ ಮಠಗಳ ಮಠಾಧೀಶರು ಭಾಗಿ

ಮೈಸೂರು: ಹುಣಸೂರು ತಾಲ್ಲೂಕಿನ ಬೆಟ್ಟದೂರು ಗ್ರಾಮದ ಶ್ರೀ ಕ್ಷೇತ್ರ ಗೊಮ್ಮಟಗಿರಿ ಭಗವಾನ್ ಬಾಹು ಬಲಿ ಸ್ವಾಮಿಯ ೭೫ನೇ ಮಹಾ ಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂ ಭಣೆಯಿಂದ ನಡೆಯಿತು.

೧೬ ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಜಲಾ ಭಿಷೇಕ, ಎಳನೀರು, ಕಬ್ಬಿನ ಹಾಲು, ಅರಿಶಿನ, ಚಂದನ, ಕ್ಷೀರ, ಕಂಕಚೂರ್ಣ, ಅರಳು, ಸಕ್ಕರೆ ಪುಡಿ, ಅಕ್ಕಿ ಹಿಟ್ಟು, ಶ್ರೀಗಂಧ ಸೇರಿದಂತೆ ವಿವಿಧ ಕಷಾ ಯಾಭಿಷೇಕ ಸೇರಿದಂತೆ ಒಟ್ಟು ೨೬ ಬಗೆಯ ಅಭಿಷೇಕ ಗಳನ್ನು ನೆರವೇರಿಸಲಾಯಿತು.

ಎಲ್ಲ ಅಭಿಷೇಕಗಳನ್ನೂ ಕಣ್ತುಂಬಿಕೊಂಡ ಭಕ್ತರು ವಿರಾಟ ಯೋಗಿ ಬಾಹುಬಲಿ ಮಹಾರಾಜ್ ಕೀ ಜೈ ಎನ್ನುತ್ತಾ ಜಯಘೋಷಗಳನ್ನು ಮೊಳಗಿಸಿದರು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಮಸ್ತಕಾ ಭಿಷೇಕವನ್ನು ಕಣ್ತುಂಬಿಕೊಂಡರು.

ಶ್ರೀ ಕ್ಷೇತ್ರ ಗೊಮ್ಮಟಗಿರಿ ಭಗವಾನ್ ಬಾಹುಬಲಿ ಸ್ವಾಮಿಯ ೭೫ನೇ ಮಹಾ ಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಮೇಘಾಲಯ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಉದ್ಘಾಟಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧು ಸೂದನ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಕ್ಷೇತ್ರ ಹೊಂಬುಜ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು ಮಾತನಾಡಿದರು.

ಕನಕಗಿರಿಯ ಶ್ರೀ ಕ್ಷೇತ್ರದ ಭುವನ ಕೀರ್ತಿ ಭಟ್ಟಾರಕ ಶ್ರೀಗಳು, ಶ್ರವಣ ಬೆಳಗೊಳ ಶ್ರೀಕ್ಷೇತ್ರದ ಅಭಿನವ ಚಾರುಕೀರ್ತಿ ಭಟ್ಟಾರಕ ಶ್ರೀಗಳು , ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್. ಆರ್. ಮಹದೇವ ಸ್ವಾಮಿ, ಹಳೇಬೀಡು ಗ್ರಾಪಂ ಅಧ್ಯಕ್ಷರಾದ ಕೆ. ಎಸ್. ಶ್ರುತಿ, ಗೊಮ್ಮಟಗಿರಿ ಸೇವಾ ಸಮಿತಿ ಅಧ್ಯಕ್ಷ ಮನ್ಮಥ್ ರಾಜ್, ಸೇವಾ ಸಮಿತಿ ಸದಸ್ಯ ಜೆ. ಎಸ್. ಸಂತೋಷ್ ಕುಮಾರ್, ಖಜಾಂಚಿ ರಾಜೇಶ್, ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಜೈನಧರ್ಮ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಮಾನವೀಯ ಮೌಲ್ಯಗಳನ್ನು ಬಿತ್ತಿದೆ. ಭಗವಾನ್ ಬಾಹುಬಲಿ ತ್ಯಾಗ, ಅಹಿಂಸೆಯ ಪ್ರತೀಕ, ಶಾಂತಿಯ ಪ್ರತಿಬಿಂಬ. ಸಮಾಜದಲ್ಲಿ ಎಷ್ಟೇ ಜಾತಿ, ಧರ್ಮಗಳು ಇರಬಹುದು. ಅವೆಲ್ಲಕ್ಕಿಂತಲೂ ಮಿಗಿಲಾಗಿ ನಾವೆಲ್ಲಾ ಮನುಕುಲಕ್ಕೆ ಸೇರಿದವರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. –ಸಿ. ಎಚ್. ವಿಜಯಶಂಕರ್, ರಾಜ್ಯಪಾಲರು, ಮೇಘಾಲಯ.

ನಡೆ ಮತ್ತು ನುಡಿ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ಮನುಷ್ಯರಾಗಲು ಸಾಧ್ಯ. ಅಹಿಂಸೆಯಿಂದ ಮಾತ್ರ ಮನುಕುಲದಲ್ಲಿ ಸುಖ-ಶಾಂತಿ ನೆಲೆಸಲಿದೆ. ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ದಿ ಎಂಬ ಬಾಹುಬಲಿಯ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಬಾಹುಬಲಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. –ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀಗಳು, ಶ್ರೀಕ್ಷೇತ್ರ ಹೊಂಬುಜ ಜೈನಮಠ

ಗೊಮ್ಮಟಗಿರಿ ಮೈಸೂರಿಗೆ ನಿಸರ್ಗದತ್ತ ರಮಣೀಯವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಪ್ರಕೃತಿಯ ಮಧ್ಯೆ ನೆಲೆಸಿರುವ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿರುವುದು ವಿಶೇಷ. ಈ ಕಲ್ಯಾಣ ಕಾರ್ಯಕ್ರಮದಿಂದ ಜಗತ್ತಿಗೆ ಶಾಂತಿ ಸಂದೇಶ ಸಾರಬಹುದಾಗಿದೆ. ಪ್ರೀತಿ ಹಾಗೂ ಸಹಬಾಳ್ವೆ ಅವಶ್ಯವಾಗಿದ್ದು, ಅತಿಯಾಸೆ, ಸ್ವಾರ್ಥಗಳನ್ನು ಬಿಟ್ಟು ಬದುಕಬೇಕಿದೆ. –ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ.

 

Tags:
error: Content is protected !!