Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮೈಸೂರು ನನ್ನನ್ನು ಸೂಜಿಗಲ್ಲಿನಂತೆ ಸೆಳೆದ ಊರು; ಆಂದೋಲನದೊಂದಿಗೆ ಸಂಗೀತ ದಿಗ್ಗಜ ರೆಹಮಾನ್‌ ಮಾತುಕತೆ

ಸಂದರ್ಶನ: ರಶ್ಮಿ ಕೋಟಿ

ಭಾರತೀಯ ಚಿತ್ರರಂಗದ ಸಂಗೀತ ಸಂಯೋಜಕ, ಆಸ್ಕರ್ ಪ್ರಶಸ್ತಿ ಹಾಗೂ ೨ ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನ ರಾದ ಎ. ಆರ್. ರೆಹಮಾನ್ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಯುವ ದಸರಾದಲ್ಲಿ ಪಾಲ್ಗೊಂಡು ಯುವಜನರನ್ನು ತಮ್ಮ ಸಂಗೀತ ದಿಂದ ಸಮ್ಮೋಹನಗೊಳಿಸಿದರು. ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ರೆಹಮಾನ್ ಅವರಿಗೆ ಸಾಂಸ್ಕೃತಿಕ ನಗರಿಯಲ್ಲಿ ದೊರೆತ ಸ್ಪಂದನೆ ಉತ್ಸಾಹ ಮೂಡಿಸಿದೆ. ಇದೇ ಸಂತೋಷದಲ್ಲಿ ಅವರು ‘ಆಂದೋಲನ’ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಿತ್ರರಂಗದಲ್ಲಿ ಅವರ ಸಾಧನೆ, ಅದರ ಹಿಂದಿನ ಅಪಾರ ಶ್ರಮವನ್ನು ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

ಆಂದೋಲನ: ನೀವು ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ಯಕ್ರಮ ನೀಡಿದ ಅನುಭವ ಹೇಗಿತ್ತು?
ರೆಹಮಾನ್: ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಸದಾ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದಿದೆ. ಈಗ ದಸರಾ ಆಚರಣೆಯ ಸಂದರ್ಭದಲ್ಲಿ ಯುವ ದಸರಾದಲ್ಲಿ ಕಾರ್ಯಕ್ರಮ ನೀಡು ವುದು ಅವಿಸ್ಮರಣೀಯವಾಗಿದೆ. ಈ ಕಾರ್ಯಕ್ರಮಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ನಾವೆಲ್ಲರೂ ಸಿದ್ಧರಾಗಬೇಕಾಯಿತು. ನಮ್ಮ ಸಂಗೀತಕ್ಕೆ ಮೈಸೂರಿನ ಜನರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಅದು ನಮಗೆ ಮತ್ತಷ್ಟು ಹೊತ್ತು ಕಾರ್ಯಕ್ರಮವನ್ನು ಮುಂದುವರಿಸುವಂತೆ ಪ್ರೇರೇಪಿಸಿತು.

ಆಂದೋಲನ: ನಿಮ್ಮ ಸಂಯೋಜನೆಗಳ ಹಿಂದಿನ ಪ್ರೇರಣೆ ಏನು ಮತ್ತು ನೀವು ಹೇಗೆ ಸೃಜನಶೀಲರಾಗಿ ಉಳಿಯುತ್ತೀರಿ?
ರೆಹಮಾನ್: ಸಂಗೀತ ನನಗೆ ಒಲಿದು ಬಂದಿ ರುವ ಒಂದು ವರ ಎಂದು ನಾನು ಭಾವಿಸುತ್ತೇನೆ. ಜನರು ನನ್ನ ಪ್ರತಿಭೆಯನ್ನು ಹೆಚ್ಚು ಇಷ್ಟಪಟ್ಟಷ್ಟೂ ನನ್ನ ಜವಾಬ್ದಾರಿ ಮತ್ತಷ್ಟೂ ಹೆಚ್ಚಾಗುತ್ತಿರುವಂತೆ ನನಗೆ ಭಾಸವಾಗುತ್ತದೆ.

ಆಂದೋಲನ: ನೀವು ಸದಾ ಸೃಜನಶೀಲರಾಗಿ ರಲು ಹೇಗೆ ಸಾಧ್ಯವಾಗಿದೆ?
ರೆಹಮಾನ್: ನಾನು ಹೊಸ ಸಂಯೋಜನೆಗಳ ಪ್ರಯೋಗ, ವಿವಿಧ ಕಲಾವಿದರೊಂದಿಗೆ ಬೆರೆಯುವ ಮೂಲಕ ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸುವ ಮೂಲಕ ಸೃಜನಶೀಲನಾಗಿರುತ್ತೇನೆ. ಪ್ರಾರ್ಥನೆ ಮತ್ತು ಧ್ಯಾನ ನನ್ನ ಆತ್ಮದೊಂದಿಗೆ ಸಂಪರ್ಕ ಸಾಽಸಲು ಸಹಾಯ ಮಾಡುತ್ತವೆ.

ಆಂದೋಲನ: ನಿಮಗೆ ಆಸ್ಕರ್ ಪ್ರಶಸ್ತಿ ಯನ್ನು ತಂದು ಕೊಟ್ಟ ಜೈ ಹೋ ತಂಡದಲ್ಲಿ ಮೈಸೂರಿನ ವಿಜಯ ಪ್ರಕಾಶ್ ಅವರ ಕೊಡುಗೆಯೂ ಇದೆ. ಇತ್ತೀಚೆಗೆ ಪೊನ್ನಿಯನ್ ಸೆಲ್ವನ್ ಸಿನಿಮಾ ಸಂಗೀತ ರಚನೆಗಾಗಿ ದೊರೆತ ರಾಷ್ಟ್ರೀಯ ಪ್ರಶಸ್ತಿಯ ಹಾಡನ್ನು ಹಾಡಿರುವವರೂ ಕೂಡ ಮೈಸೂರಿನ ಹುಡುಗಿ ರಕ್ಷಿತಾ. ನಿಮ್ಮ ತಂಡದಲ್ಲಿನ ಮೈಸೂರಿನ ಪ್ರತಿಭೆಗಳ ಕುರಿತು ನೀವು ಏನು ಹೇಳುತ್ತೀರಿ?
ರೆಹಮಾನ್: ಸಾಂಸ್ಕೃತಿಕ ಲೋಕಕ್ಕೆ ಮೈಸೂರು ಅನೇಕ ಪ್ರತಿಭೆಗಳನ್ನು ನೀಡಿದೆ. ಈಗ ನಮ್ಮ ತಂಡದಲ್ಲಿರುವ ರಕ್ಷಿತಾ ಹಾಗೂ ವಿಜಯ ಪ್ರಕಾಶ್ ಅತ್ಯುತ್ತಮ ಪ್ರತಿಭೆಗಳು. ಅವರಿಬ್ಬರ ಧ್ವನಿ ಅಪರೂಪದ್ದು. ಹಾಗೂ ಇಬ್ಬರೂ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ನಾನು ಸದಾ ಉತ್ತಮ ಮನುಷ್ಯರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತೇನೆ. ಒಳ್ಳೆಯ ಧ್ವನಿ ಇದ್ದು ಸರಿಯಾದ ವ್ಯಕ್ತಿತ್ವವಿಲ್ಲದಿದ್ದರೆ ಅಂತಹವರೊಂದಿಗೆ ಗುರುತಿಸಿಕೊಳ್ಳಲು ನಾನು ಎಂದೂ ಬಯಸುವುದಿಲ್ಲ.

ಆಂದೋಲನ: ತಮಿಳಿನ ರೋಜ ಚಿತ್ರದಿಂದ ಇಂದಿನವರೆಗೆ ನಿಮ್ಮ ಸಂಗೀತ ಪಯಣ ಹೇಗೆ ವಿಕಸನಗೊಂಡಿದೆ?
ರೆಹಮಾನ್: ರೋಜದಿಂದ ಇಂದಿನವರೆಗೆ, ಇದು ನಂಬಲಾಗದ ಪಯಣವಾಗಿದೆ. ಕಳೆದ ಮೂರು ದಶಕಗಳಲ್ಲಿ ನಾನು ಸಂಗೀತ ಸಂಯೋಜಕನಾಗಿ ಬೆಳೆದಿದ್ದೇನೆ, ವಿವಿಧ ಪ್ರಕಾರಗಳು ಮತ್ತು ಶೈಲಿಗಳನ್ನು ಪ್ರಯೋಗಿಸುತ್ತಿದ್ದೇನೆ. ಅಸಾಧಾರಣ ನಿರ್ದೇಶಕರು ಮತ್ತು ಸಂಗೀತಗಾರರೊಂದಿಗೆ ಕೆಲಸ ಮಾಡುವ ಅದೃಷ್ಟ ನನಗೆ ಸಿಕ್ಕಿದೆ. ನನ್ನ ಸಂಗೀತವು ನನ್ನ ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಅನ್ವೇಷಣೆಯನ್ನು ಪ್ರತಿಬಿಂಬಿಸುತ್ತದೆ.

ಆಂದೋಲನ: ಯುವ ಸಂಗೀತಗಾರರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ?
ರೆಹಮಾನ್: ಯುವ ಪೀಳಿಗೆಗೆ ಸಾಧನೆಯ ಮೆಟ್ಟಿಲುಗಳನ್ನು ಏರುವಾಗ ಬೇರೆಯವರಂತಾಗಲು ಬಯಸದೆ ತಮ್ಮತನವನ್ನು ಉಳಿಸಿಕೊಳ್ಳಿ ಎಂದು ಹೇಳಲು ಬಯಸುತ್ತೇನೆ. ಮತ್ತು ತಾವು ಮಾಡಬಯಸುವ ಕೆಲಸದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ಆಗ ಮಾತ್ರ ಸಾಧನೆ ಸಾಧ್ಯ. ನಿಮ್ಮ ಬೇರುಗಳಿಗೆ ನಿಷ್ಠರಾಗಿರಿ, ಆದರೂ ಕಲಿಕೆ ಮತ್ತು ಬೆಳವಣಿಗೆಗೆ ಮುಕ್ತರಾಗಿರಿ. ನಿಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿ, ಆದರೆ ನಿಮ್ಮ ಆತ್ಮವನ್ನು ಸಹ ಬೆಳೆಸಿಕೊಳ್ಳಿ. ನೆನಪಿಡಿ, ಸಂಗೀತವು ಆಧ್ಯಾತ್ಮಿಕ ಪ್ರಯಾಣವಾಗಿದೆ, ಕೇವಲ ವೃತ್ತಿಯಲ್ಲ.

ಆಂದೋಲನ: ನಿಮ್ಮ ಮೆಚ್ಚಿನ ಮೈಸೂರು ಖಾದ್ಯ?
ರೆಹಮಾನ್: ನನಗೆ ಮೈಸೂರು ಮಸಾಲೆ ದೋಸೆ ತುಂಬಾ ಇಷ್ಟ! ಜೊತೆಗೆ ಮೈಸೂರು ಪಾಕ್ ಕೂಡ. ಆದರೆ ಶುಗರ್ ಫ್ರೀ ಮೈಸೂರು ಪಾಕ್!

 

 

Tags: