ಮಹಾದೇಶ್ ಎಂ.ಗೌಡ
ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದ ಪ್ರಾರಂಭವಾಗಿರುವ ಯುಗಾದಿ ಜಾತ್ರಾ ಮಹೋತ್ಸವ ಮಾರ್ಚ್ 19ರವರೆಗೆ ಜರುಗಲಿದ್ದು ಲಕ್ಷಾಂತರ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 16 ರ ಸೋಮವಾರ ವಿಶೇಷ ಕಾರ್ಯಕ್ರಮಗಳು ಪ್ರಾರಂಭ ವಾಗಿವೆ. ಮಾರ್ಚ್ 17ರ ಮಂಗಳವಾರ ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ವಿಶೇಷ ಸೇವೆ ಮತ್ತು ಉತ್ಸವಾದಿಗಳು ಜರುಗಲಿವೆ. ಮಾರ್ಚ್ 18ರ ಬುಧವಾರ ಶ್ರೀ ಸ್ವಾಮಿಗೆ ವಿಶೇಷ ಸೇವೆ ಮತ್ತು ಉತ್ಸವಾದಿಗಳು ಜರುಗಲಿದ್ದು ಮಾರ್ಚ್ 19ರಂದು ಯುಗಾದಿ ಅಮಾವಾಸ್ಯೆ, ಮಹಾರಥೋತ್ಸವ ಬೆಳಿಗ್ಗೆ 9.45ರಿಂದ 11ಗಂಟೆವರೆಗೆ ನಡೆಯಲಿದೆ. ನಂತರ ಗುರು ಬ್ರಹ್ಮತ್ಸವ ಮತ್ತು ಅನ್ನ ಬ್ರಹ್ಮತ್ಸವ ಕಾರ್ಯಕ್ರಮ ಜರುಗಲಿದೆ.
ಜಾತ್ರಾ ಮಹೋತ್ಸವಕ್ಕೆ ತಮಿಳುನಾಡಿನ ವಿವಿಧ ಕಡೆಗಳಿಂದ ನಿರೀಕ್ಷೆಗೂ ಮೀರಿ ಜನರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಇವರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ ಪ್ರಾಧಿಕಾರದಿಂದ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಭದ್ರತೆ ಒದಗಿಸಲಾಗಿದೆ.
ಪಾಲಾ ಮುಖ್ಯರಸ್ತೆ, ವಿಶೇಷ ದಾಸೋಹ ಸ್ಥಳ ಹಾಗೂ ಇನ್ನಿತರ ಕಡೆ ಮೊಬೈಲ್ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಜಾತ್ರಾ ಮಹೋತ್ಸವ ಪ್ರಯುಕ್ತ ಹೆಚ್ಚಿನ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಅಂತರಗಂಗೆ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಲು ಪುಣ್ಯಸ್ನಾನ ಮಾಡಲು ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ 50 ಶವರ್ಗಳನ್ನು ನಿರ್ಮಾಣ ಮಾಡಲಾಗಿದೆ. ಬೆಳಗ್ಗೆ ಹಾಗೂ ರಾತ್ರಿ ಪಾಳಿಗಳಲ್ಲಿ ದೇವಸ್ಥಾನದ ಆವ ರಣ ಹಾಗೂ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತೆ ಕಾಪಾ ಡಲು ಹೆಚ್ಚುವರಿ ಪೌರಕಾರ್ಮಿಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ರಾಜ ಗೋಪುರ ಮುಂಭಾಗದ ಗೇಟ್ ಮೂಲಕ ದರ್ಶನ ಪಡೆಯಲು ಉಚಿತ ಟಿಕೆಟ್ ವಿತರಿಸಲಾಗುತ್ತಿದೆ. ಇದೇ ಪ್ರವೇಶದ್ವಾರದಲ್ಲಿ ವಿಕಲಚೇತ ನರೂ ಕೂಡ ತೆರಳಿ ದರ್ಶನ ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ತಿಳಿಸಿದ್ದಾರೆ.
ವಿಶೇಷ ಬಸ್ ವ್ಯವಸ್ಥೆ
ಮ.ಬೆಟ್ಟದಲ್ಲಿ ನಡೆಯುತ್ತಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಮಂಡ್ಯ, ಮೈಸೂರು, ಚಾಮರಾಜನಗರ, ಕನಕಪುರ, ರಾಮನಗರ, ಆನೇಕಲ್ ಡಿಪೋಗಳಿಂದ 300ಕ್ಕೂ ಹೆಚ್ಚು ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ನಾಗರಾಜು ‘ಆಂದೋಲನ’ಕ್ಕೆ ತಿಳಿಸಿದರು.
ಕಣ್ಮನ ಸೆಳೆಯುತ್ತಿದೆ ವಿದ್ಯುತ್ ದೀಪಾಲಂಕಾರ
ಮ.ಬೆಟ್ಟದಲ್ಲಿ ಜಾತ್ರಾ ಮಹೋತ್ಸವಗಳಿಗೆ 3 ವರ್ಷಗಳಿಂದ ಮಿನಿ ದಸರಾ ಮಾದರಿಯಲ್ಲಿ ವಿಶೇಷವಾಗಿ ವಿನೂತನ ಮಾದರಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತಿದೆ. ಇದು ಭಕ್ತಾದಿಗಳ ಕಣ್ಮನ ಸೆಳೆಯುತ್ತಿದೆ.
ದ್ವಿಚಕ್ರ ವಾಹನ, ಆಟೋಗಳಿಗೆ ನಿರ್ಬಂಧ
ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ಮ.ಬೆಟ್ಟಕ್ಕೆ 500ಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ ಗಳು ಸಂಚಾರ ಮಾಡುವುದರಿಂದ ಟ್ರಾಫಿಕ್ ಜಾಮ್ ತಡೆಗಟ್ಟಲು ಮಾರ್ಚ್ 17ರ ಬೆಳಿಗ್ಗೆ ಆರು ಗಂಟೆಯಿಂದ ಮಾರ್ಚ್ 19 ರ ಸಂಜೆ 6 ಗಂಟೆಯವರೆಗೆ ಮಲೆ
ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ, ಆಟೋಗಳಿಗೆ ನಿರ್ಬಂಧ ವಿಧಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬರುವ ಭಕ್ತಾದಿಗಳಿಗೆ ಕೌದಳ್ಳಿಯಲ್ಲಿಯೇ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್ ಸ್ಥಳದಿಂದ ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ದ್ವಿಚಕ್ರ ವಾಹನ ಸವಾರರು ಇದರ ಸದ್ಬಳಕೆ ಪಡೆದುಕೊಳ್ಳಬಹುದು.
ಸೌದೆ ಒಲೆ ನಿರ್ಮಾಣ
ಮಧ್ಯ ಪ್ರಾಚ್ಯ ದೇಶಗಳ ಯುದ್ಧ ನಡೆಯುತ್ತಿರು ವುದರಿಂದ ದೇಶಾದ್ಯಂತ ಸಿಲಿಂಡರ್ ಕೊರತೆ ಇದೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದುವರೆಗೂ ಯಾವುದೇ ಕೊರತೆಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಸೌದೆ ಒಲೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮ.ಬೆಟ್ಟದಲ್ಲಿ ನಡೆಯುತ್ತಿರುವ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಪಾದಯಾತ್ರೆಯ ಮೂಲಕ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಕೊಂಡಿದ್ದಾರೆ. ಬಿಸಿಲಿನ ತಾಪಮಾನ ಇರುವುದರಿಂದ ದೇವಸ್ಥಾನದ ಆವರಣದಲ್ಲಿ ನೀರು ಹಾಕಲಾಗುತ್ತಿದ್ದು, ಮೂಲಸೌಲಭ್ಯ ಕಲ್ಪಿಸಲಾಗಿದೆ.
-ಎ.ಇ.ರಘು, ಕಾರ್ಯದರ್ಶಿ,
ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ





