Mysore
17
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ತಾಯ್ತನದಿಂದ ವಿದ್ಯಾರ್ಥಿನಿಯರ ಸಲಹುವ ಘನ ವ್ಯಕ್ತಿತ್ವ 

ಚಿರಂಜೀವಿ ಸಿ. ಹುಲ್ಲಹಳ್ಳಿ

‘ಹೆಣ್ಣು ಹೆಣ್ಣೆಂದೇಕೆ ಹೀಗಳೆಯುವಿರಿ, ನಿಮ್ಮನ್ನು ಹೆತ್ತವಳು ಹೆಣ್ಣಲ್ಲವೇ’… ಈ ವಚನದ ಸಾಲು ಬಹುಶಃ ‘ಅವರ’ ಅಂತರಾಳವನ್ನು ಕಲಕಿರಬೇಕು. ಹಾಗಾಗಿಯೇ ‘ಅವರು’ ಹೆಣ್ಣುಮಕ್ಕಳ ಸ್ವಾಲವಂಬನೆಗೆ ಬುನಾದಿಯಾಗುವ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಅವರು, ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ. ಬಸವಾದಿ ಶರಣರ ಪ್ರಗತಿಪರ ಚಿಂತನೆಗಳನ್ನು ತನ್ನ ನಡೆ-ನುಡಿಗಳಲ್ಲಿ, ಕೃತಿಯಲ್ಲಿ ಪಾಲಿಸುತ್ತಿರುವವರು ಶ್ರೀ ಚಿದಾನಂದ ಸ್ವಾಮೀಜಿ.

ನಟರಾಜ ಪ್ರತಿಷ್ಠಾನವನ್ನು ಸ್ಥಾಪಿಸಿ, ಶೋಷಿತರು, ಬಡವರು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ತ್ರಿವಿಧ ದಾಸೋಹ ಧಾರೆ ಎರೆಯುತ್ತಾ, ಮಕ್ಕಳ ಮುಗ್ಧ ಪ್ರೀತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ವಸತಿ ನಿಲಯಗಳಲ್ಲಿ ಊಟೋಪಚಾರ, ಮಕ್ಕಳ ಆರೈಕೆ, ಪೋಷಣೆಗೆ ಒತ್ತು ನೀಡುವ ಶ್ರೀಗಳು ಕಾಲೇಜಿನ ಆವರಣಕ್ಕೆ ಆಗಮಿಸಿ ಪ್ರೀತಿಯಿಂದ ಮಕ್ಕಳ ಕುಶಲೋಪರಿ ವಿಚಾರಿಸಿ ಅಂತಃ ಕರಣದ ಮಾತುಗಳನ್ನಾಡಿ ಪ್ರೀತಿ ಹಂಚುತ್ತಾರೆ.

ಸ್ತ್ರೀ ಸಬಲೀಕರಣಕ್ಕೆ ಮುಂದಾಗಿರುವ ಶ್ರೀಗಳ ಕುರಿತು ಕೆಲ ವಿದ್ಯಾರ್ಥಿಗಳು ಹಂಚಿಕೊಂಡಿರುವ ಮಾತುಗಳು ಇಲ್ಲಿವೆ.

” ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಟರಾಜ ಪ್ರತಿಷ್ಠಾನ ಅನುಕೂಲ ಮಾಡಿಕೊಡುತ್ತಿದೆ. ನಟರಾಜ ಕಾಲೇಜು ಎಂದರೆ ಸುರಕ್ಷತೆಗೆ ಹೆಸರುವಾಸಿ. ಒಂದು ಖಾಸಗಿ ಸಂಸ್ಥೆ ಯಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವ ನೀಡಲಾಗುತ್ತಿದೆ. ಮುಂದೆಯೋ ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತೇವೆ. ಇಲ್ಲಿನ ಪಠ್ಯೇತರ ಚಟುವಟಿಕೆಗಳು ನಮಗೆ ಬಹಳ ಇಷ್ಟ.”

-ಗಗನ, ವಿದ್ಯಾರ್ಥಿನಿ, ದ್ವಿತೀಯ ಪಿಯುಸಿ

” ಮೊದಲು ನನಗೆ ನಟರಾಜ ಕಾಲೇಜು ಎಂದಾಗ ಭಯವಾಗುತ್ತಿತ್ತು. ಆದರೆ, ನಾನು ಕಾಲೇಜಿಗೆ ಕಾಲಿಡುತ್ತಿದ್ದಂತೆ ಆ ಭಯವೆಲ್ಲ ಕಡಿಮೆಯಾಯಿತು. ಏಕೆಂದರೆ ಇಲ್ಲಿನ ಮಠದ ವಾತಾವರಣ ನನ್ನನ್ನು ಸೆಳೆದುಕೊಂಡಿತು. ಶಿಕ್ಷಕ ವರ್ಗದ ಒಡನಾಟ ಉತ್ತಮವಾಗಿದೆ. ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಮ್ಮ ಬದುಕಿನ ಮೌಲ್ಯಗಳ ವಿಚಾರ ತಿಳಿದುಕೊಳ್ಳಬಹುದು.”

-ಭಾವನಾ, ವಿದ್ಯಾರ್ಥಿನಿ, ದ್ವಿತೀಯ ಪಿಯುಸಿ

” ಶ್ರೀಗಳು ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣ ಕೊಡುತ್ತಿದ್ದಾರೆ. ಶ್ರೀಗಳು, ಕಾಲೇಜಿನ ಉಪನ್ಯಾಸಕರು ನಮ್ಮನ್ನು ತಾಯಿಯ ರೀತಿ ನೋಡಿಕೊಳ್ಳುತ್ತಾರೆ. ಕಾಲೇಜಿನ ಪ್ರವೇಶ ಶುಲ್ಕ ಕಡಿಮೆಯಿದೆ. ನಿಗದಿತ ದಿನಾಂಕದೊಳಗೆ ಪ್ರವೇಶ ಶುಲ್ಕವನ್ನು ಪಾವತಿಸಲು ಕಷ್ಟವಾಗಿ, ಸ್ವಲ್ಪ ಸಮಯಾವಕಾಶಕ್ಕಾಗಿ ಮನವಿ ಮಾಡಿದರೆ, ಶ್ರೀಗಳು ಸ್ಪಂದಿಸುತ್ತಾರೆ. ಇದರಿಂದ ಪೋಷಕರಿಗೆ ಸಹಾಯವಾಗುತ್ತದೆ.”

-ಎನ್.ನಿತ್ಯಾ, ವಿದ್ಯಾರ್ಥಿನಿ, ದ್ವಿತೀಯ ಬಿ.ಎ.

” ನಟರಾಜ ಕಾಲೇಜಿನ ಬಗ್ಗೆ ನಮ್ಮ ಅಕ್ಕಂದಿರನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಅವರಿಂದ ಬಂದ ಒಳ್ಳೆಯ ಅಭಿ ಪ್ರಾಯ, ನಿರ್ಭೀತಿಯ ಮಾತುಗಳು ನನಗೆ ಕಾಲೇಜು ಸೇರುವ ಬಯಕೆಯನ್ನು ಹೆಚ್ಚಿಸಿದವು. ಇಲ್ಲಿಗೆ ಬಂದು ಒಂದೆರಡು ತಿಂಗಳು ಕಳೆದ ನಂತರ ನನಗೂ ಅದು ನಿಜವೆನಿಸಿತು. ಕಾಲೇಜಿನಲ್ಲಿ ಉತ್ತಮ ಶಿಕ್ಷಕವರ್ಗ ಇದೆ. ಶ್ರೀ ಚಿದಾನಂದ ಸ್ವಾಮೀಜಿ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ.”

-ಚೌಡಮ್ಮ, ವಿದ್ಯಾರ್ಥಿನಿ,  ದ್ವಿತೀಯ ಪಿಯುಸಿ 

” ಗುಲ್ಬರ್ಗದವಳಾದ ನಾನು ಪ್ರಥಮ ಪಿಯುಸಿಯಿಂದ ನಟರಾಜ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಬಡ ಕುಟುಂಬದಿಂದ ಬಂದ ನಮಗೆ ಶಿಕ್ಷಣ, ವಸತಿ, ಊಟ ನೀಡುವ ಮೂಲಕ ಶ್ರೀಗಳು ನೆರವಾಗಿದ್ದಾರೆ. ನಮ್ಮ ಕಷ್ಟಗಳನ್ನು ಶ್ರೀಗಳ ಮುಂದೆ ಹೇಳಿಕೊಂಡರೆ, ಸಂಬಂಧಪಟ್ಟವರಿಗೆ ಹೇಳಿ ಬಗೆಹರಿಸುತ್ತಾರೆ. ಅವರ ಜವಾಬ್ದಾರಿ ನಿರ್ವಹಣೆಯ ಪರಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ.”

-ಕಾವೇರಿ, ವಿದ್ಯಾರ್ಥಿನಿ, ದ್ವಿತೀಯ ಬಿ.ಕಾಂ.

Tags:
error: Content is protected !!