ಮೈಸೂರು: ಪ್ರಾದೇಶಿಕ ಅಸಮತೋಲನ ನಿವಾರಣೆ ಜತೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಯನ್ನು ತೆಗೆದು ಹಾಕಲು ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಜನವರಿ ತಿಂಗಳ ಮೊದಲ ವಾರದಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ.
ಚೆಲುವ ಚಾಮರಾಜನಗರದ ದಿಕ್ಕನ್ನು ಬದಲಿಸು ವಂತಹ ಯೋಜನೆಗಳಿಗೆ ಒಪ್ಪಿಗೆ ಪಡೆದುಕೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ. ಧಾರ್ಮಿಕ, ಅರಣ್ಯ, ಜಲ, ಪರಿಸರವನ್ನು ಕೇಂದ್ರೀಕರಿಸಿ ಪ್ರವಾಸೋದ್ಯಮ, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಚಾಮರಾಜನಗರ ಜಿಲ್ಲೆಯ ಕಡೆಗೆ ಸೆಳೆಯುವ ಪ್ರಯತ್ನವನ್ನು ಮಾಡಲಾಗಿದೆ. ಇದಕ್ಕಾಗಿ ೫೦೦ ಕೋಟಿ ರೂ.ವೆಚ್ಚದ ಡಿಪಿಆರ್ ತಯಾರು ಮಾಡಿ ಮುಖ್ಯಮಂತ್ರಿ ಅವರ ಒಪ್ಪಿಗೆ ಪಡೆದು ಸಂಪುಟ ಸಭೆಯಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಜನವರಿ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲು ನಿರ್ಧರಿಸಿರುವ ಕಾರಣ ಸರ್ಕಾರಿ ಅತಿಥಿ ಗೃಹದಲ್ಲಿ ಸಚಿವದ್ವಯರಾದ ಕೆ. ವೆಂಕಟೇಶ್, ಡಾ. ಎಚ್. ಸಿ. ಮಹದೇವಪ್ಪ ಅವರ ಸಮ್ಮುಖದಲ್ಲಿ ಅಽಕಾರಿಗಳ ಸಭೆ ನಡೆಸಿ ಚರ್ಚಿಸಿದ ಬಳಿಕ ಹಲವು ನಿರ್ಧಾರ ಮಾಡಲಾಯಿತು. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ವಸತಿ ಶಾಲೆ ಅಥವಾ ಮಹದೇಶ್ವರ ಪ್ರತಿಮೆ ಇರುವ ಕಡೆಯಲ್ಲಿ ಸಚಿವ ಸಂಪುಟ ಸಭೆ ಆಯೋಜನೆ ಮಾಡಲು ನಿರ್ಧರಿಸಲಾಗಿದೆ.
ಯೋಜನೆಯಲ್ಲೇನಿದೆ?
– ಧಾರ್ಮಿಕ ಸ್ಥಳಗಳಲ್ಲಿ ಮೂಲ ಸೌಕರ್ಯ
– ಭರಚುಕ್ಕಿ ಫಾಲ್ಸ್ ಅಭಿವೃದ್ಧಿ
– ಪರಿಸರ ಪ್ರವಾಸೋದ್ಯಮ
– ಜಲ ಪ್ರವಾಸೋದ್ಯಮ
– ಅರಣ್ಯ ಪ್ರದೇಶಗಳ ವೀಕ್ಷಣೆಗೆ ಒತ್ತು
– ಬಿರ್ಸಾಮುಂಡಾ ಪಾರ್ಕ್ ನಿರ್ಮಾಣ
– ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಸಾರಿಗೆ ಎಲೆಕ್ಟ್ರಿಕಲ್ ವಾಹನಗಳು
– ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸೌಂದರ್ಯೀಕರಣ





