Mysore
21
overcast clouds

Social Media

ಬುಧವಾರ, 01 ಜುಲೈ 2026
Light
Dark

ಕಾವೇರಿ ನದಿ ಪಾತ್ರದ 40 ಸಾವಿರ ಹೆಕ್ಟರ್ ಪ್ರದೇಶಕ್ಕೂ ಸಂಪೂರ್ಣ ನೀರು : ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

ಬೆಂಗಳೂರು– ಕಾವೇರಿ ನದಿ ಪಾತ್ರದ 40 ಸಾವಿರ ಹೆಕ್ಟರ್ ಪ್ರದೇಶಕ್ಕೂ ಈ ಭಾರಿ ಸಂಪೂರ್ಣ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.
ವಿಧಾನ ಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯ ಮಧು ಜಿ.ಮಾದೇಗೌಡರು ಪ್ರಶ್ನೆ ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಸಿ ನಂತರ ಮೊದಲ ಭಾಗಕ್ಕೆ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಕಾನೂನು ಇರುವುದು ಮೊದಲು ಕೊನೆಯ ಭಾಗದಿಂದ ನೀರು ಹರಿಸಿಕೊಂಡು ಬಂದು ಆ ಮೇಲೆ ಮೊದಲ ಭಾಗಕ್ಕೆ ಹರಿಸಬೇಕು ಎಂದೇ ಕಾನೂನು ಜಾರಿಯಲ್ಲಿದೆ. ಆದರೆ ಮಂಡ್ಯದಲ್ಲಿ ಆ ರೀತಿ ಮಾಡಲು ಎಷ್ಟು ಜನ ಪೊಲೀಸರನ್ನು ಕಾವಲಿಗೆ ನಿಲ್ಲಿಸಬೇಕು ಎಂಬ ಬಗ್ಗೆ ಸದಸ್ಯರೆ ಉತ್ತರ ಹೇಳಬೇಕು ಎಂದರು.
ಕೆಆರ್‍ಎಸ್, ಹೇಮಾವತಿ, ಕಬಿನಿ ಜಲಾಶಯಗಳಲ್ಲಿ ಫೆ.14ರವರೆಗೆ 29.086 ಟಿಎಂಸಿ ನೀರು ಲಭ್ಯ ಇದೆ. ನೀರಿನ ಕೊರತೆ ಇಲ್ಲ. ಹಾಗಾಗಿ ಜಲಾನಯನ ಪ್ರದೇಶ್ ಎಲ್ಲಾ ಭಾಗಗಳಿಗೂ ನೀರು ಪೂರೈಸಲಾಗುವುದು ಎಂದು ಹೇಳಿದರು.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿಗೆ ಹೇಮಾವತಿ ನದಿಯಿಂದ ನಾಲೆಯ ಮೂಲಕ ಕೆರೆಗಳಿಗೆ ನೀರನ್ನು ಹರಿಸುವ ಕಾಮಗಾರಿಯನ್ನು ಇದೇ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಸದಸ್ಯ ಅ.ದೇವೇಗೌಡರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯಿಂದ ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಕೆರೆಗಳಿಗೆ ನೀರು ಪೂರೈಸುವ ಏತ ನೀರಾವರಿ ಯೋಜನೆಗಳ ಅಂದಾಜು ವೆಚ್ಚವನ್ನು ಹೆಚ್ಚಿಸಿದ್ದೇಕೆ ಎಂದು ಸದಸ್ಯ ಮಂಜುನಾಥ್ ಭಂಡಾರಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಹೆಚ್ಚುವರಿ ತೆರಿಗೆ ಹೊರೆ, ಪೈಪ್ ಲೈನ್ ಬದಲಾವಣೆ ಕಾಮಗಾರಿಗಳು ಹೊಸದಾಗಿ ಸೇರ್ಪಡೆಯಾಗಿದ್ದರಿಂದ ಯೋಜನಾ ವೆಚ್ಚವನ್ನು ಪರಿಷ್ಕರಿಸಲಾಗಿದೆ. ಆ ವೇಳೆ ಮೂಲ ಯೋಜನಾ ವರದಿಯ ಮೊತ್ತಕ್ಕೆ ಶೇ.25.07ರಷ್ಟು ಪ್ರಮಾಣದ ಒಳಗಿರುವಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಮುರನೇ ಹಂತದ ಕಾಮಗಾರಿಗೆ ಮುಳುಗಡೆಯಾಗುವ ಗ್ರಾಮಗಳ ಪುನರ್ ವಸತಿಗೆ ಕೈಗೊಂಡ ಕ್ರಮಗಳ ಕುರಿತು ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 20 ಗ್ರಾಮಗಳು ಮುಳುಗಡೆಯಾಗಲಿವೆ. ಅವುಗಳ ಪೈಕಿ ಎಂಟು ಗ್ರಾಮಗಲ ಪುನರ್ ವಸತಿಗೆ ಕೇಂದ್ರಗಳನ್ನು ಗುರುತಿಸಲಾಗಿದೆ. ಇನ್ನೂ 12 ಗ್ರಾಮಗಳಿಗೆ ಸ್ಥಳ ಗುರುತಿಸಬೇಕಿದೆ ಎಂದು ವಿವರಿಸಿದರು.
ಕೃಷ್ಣಾ ನದಿ ವಿವಾದ ಕುರಿತ ನ್ಯಾಯಾಧೀಕರಣ ನೀಡಿರುವ ತೀರ್ಪು ಇನ್ನೂ ಅಧಿಸೂಚನೆ ಜಾರಿಯಾಗಿಲ್ಲ. ಈ ಹಂತದಲ್ಲಿ ಎಷ್ಟು ಪ್ರದೇಶಕ್ಕೆ ನೀರು ಪೂರೈಸಲಾಗುವುದು ಎಂದು ಸ್ಪಷ್ಟವಾಗಿ ಹೇಳುವುದು ಸಾಧ್ಯವಿಲ್ಲ. ಆದರೂ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ನ್ಯಾಯಾಧೀಕರಣದ ತೀರ್ಪನ್ನು ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಲಾಗುವುದು ಎಂದರು.
ಪುನರ್ವಸತಿ ಯೋಜನೆಗೆ ಪರಿಹಾರ ನೀಡಲು ತಾರತಮ್ಯ ಇತ್ತು. ಕೃಷ್ಣ ಮೇಲ್ದಂಡೆಗೆ ಸೀಮಿತವಾಗಿ ಏಕರೂಪದ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಅದೇ ಮಾದರಿಯನ್ನು ಎತ್ತಿನಹೊಳೆ ಯೋಜನೆಗೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!