ಹನೂರು: ಚಿರತೆ ದಾಳಿಗೆ ಮೃತಪಟ್ಟ ಕೆ.ವಿ.ಎನ್ ದೊಡ್ಡಿ ಗ್ರಾಮದ ಗೋವಿಂದಯ್ಯ ಅವರ ಮನೆಗೆ ಶಾಸಕ ಆರ್ ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ಚಿರತೆ ದಾಳಿಗೆ ಗೋವಿಂದಯ್ಯ ಎಂಬವರು ಮೃತಪಟ್ಟಿದ್ದರು. ಶಾಸಕ ಆರ್ ನರೇಂದ್ರ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಶಾಸಕ ಆರ್ ನರೇಂದ್ರ ಮಾತನಾಡಿ ನಮ್ಮ ಹನೂರು ಕ್ಷೇತ್ರದಲ್ಲಿ ಇದುವರೆಗೂ ಇಂತಹ ಪ್ರಕರಣಗಳು ಕಂಡು ಬಂದಿರಲಿಲ್ಲ, ಇದೀಗ ಚಿರತೆ ದಾಳಿಗೆ ಮೃತಪಟ್ಟಿರುವುದು ದುರ್ದೈವದ ಸಂಗತಿ, ಅರಣ್ಯ ಇಲಾಖೆ ವತಿಯಿಂದ ನೀಡಲಾಗುವ 7.5ಲಕ್ಷ ಪರಿಹಾರವನ್ನು 1ವಾರದೊಳಗೆ ನಿಮ್ಮ ಖಾತೆಗೆ ಜಮಾ ಮಾಡಲು ಅಧಿಕಾರಿಗಳಿಗೆ ತಿಳಿಸುತ್ತೇನೆ. ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಈಗಾಗಲೇ ಅರಣ್ಯ ಇಲಾಖೆಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ,ಚಿರತೆ ಸೆರೆ ಹಿಡಿಯುವವರೆಗೂ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ತೆರಳಬಾರದು ಎಂದು ಸಲಹೆ ನೀಡಿದರು.
ಕಾವೇರಿ ವನ್ಯಜೀವಿ ವಿಭಾಗದ ಡಿಸಿಎಫ್ ನಂದೀಶ್ ಮಾತನಾಡಿ ಈಗಾಗಲೇ ಚಿರತೆ ಸೆರೆ ಹಿಡಿಯಲು ಹದಿನೈದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ 4 ಬೋನುಗಳನ್ನು ಸಹ ಇಡಲಾಗಿದ್ದು ಆದಷ್ಟು ಬೇಗ ಚಿರತೆ ಸೆರೆ ಹಿಡಿಯಲು ಕ್ರಮ ವಹಿಸಲಾಗುವುದು .ಗ್ರಾಮಸ್ಥರು ಸಹ ಇಲಾಖೆಯ ಜೊತೆ ಸಹಕರಿಸಬೇಕು. ರಾತ್ರಿ ಗಸ್ತು ಹಾಗೂ ಬೆಳಗಿನ ವೇಳೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಮಸ್ಥರಿಗೆ ಚಿರತೆ ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಎಸಿಎಫ್ ಅಂಕರಾಜು, ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್, ಎಎಸ್ಸೈ ಶಿವರಾಜು, ಪೇದೆಗಳಾದ ಮೂರ್ತಿ, ರಾಘವೇಂದ್ರ,ಮುಖಂಡರುಗಳಾದ ವೆಂಕಟರಮಣನಾಯ್ಡು ನಾಗೇಶ್ ಮಲ್ಲಯ್ಯ ಹಾಗೂ ಇನ್ನಿತರರು ಹಾಜರಿದ್ದರು.





