Mysore
20
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಮಂಡ್ಯ : ಅನಾರೋಗ್ಯದಿಂದ ನಟ ರವಿ ಪ್ರಸಾದ್ ನಿಧನ

ಮಂಡ್ಯ : ಅನಾರೋಗ್ಯದಿಂದ ಬಳಲುತ್ತಿದ್ದ ನಟ ಎಂ. ರವಿಪ್ರಸಾದ್ (43) ಬುಧವಾರ ಸಂಜೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು  ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾಹಿತಿ ಡಾ. ಎಚ್.ಎಸ್. ಮುದ್ದೇಗೌಡರ ಪುತ್ರರಾದ ರವಿಪ್ರಸಾದ್, ತಂದೆ-ತಾಯಿ, ಇಬ್ಬರು ತಂಗಿಯರು, ಪತ್ನಿ, ಮಗ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮಂಡ್ಯದ ಗೆಳೆಯರ ಬಳಗ ಹಾಗೂ ಜನಧನಿ ರಂಗಭೂಮಿ ತಂಡದ ಮೂಲಕ ಕಲೆಯ ಗೀಳು ಅಂಟಿಸಿಕೊಂಡ ರವಿಪ್ರಸಾದ್, ಧಾರವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಲೇ ಮಂಡ್ಯ ರವಿ ಆಗಿ ಪ್ರಸಿದ್ಧ ಪಡೆದಿದ್ದರು.
ಬಾಲ್ಯದಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರವಿ, ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡರು. ಎಂ.ಎ. (ಇಂಗ್ಲೀಷ್) ಮತ್ತು ಎಲ್.ಎಲ್.ಬಿ. ಮಾಡಿದ್ದರೂ ಆಯ್ಕೆ ಮಾಡಿಕೊಂಡಿದ್ದ ವೃತ್ತಿ ಮಾತ್ರ ನಟನೆ. 1996ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿ ಅಲ್ಲಿಂದ ಟಿ.ಎಸ್. ನಾಗಾಭರಣ ನಿರ್ದೇಶನದ ಮಹಾಮಾಯಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಮೊದಲು ಬ್ರೇಕ್ ನೀಡಿದ್ದ ಧಾರವಾಹಿ ಮಿಂಚು, ನಂತರ ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಪೋರ್ಟ್ಸ್ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಕೆಲವರ್ಷಗಳ ಹಿಂದೆ ಪ್ರಸಾರವಾದ ಮಗಳು ಜಾನಕಿ ಧಾರವಾಹಿಯ ಚಂದು ಭಾರ್ಗಿ ಪಾತ್ರದ ಮೂಲಕ ರವಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೆ, ಕಾಫಿ ತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ಗುರುವಾರ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ :
ಮೃತ ಎಂ. ರವಿಪ್ರಸಾದ್ ಅವರ ಅಂತ್ಯಕ್ರಿಯೆ ನಗರದ ಕಲ್ಲಹಳ್ಳಿಯಲ್ಲಿರುವ ರುದ್ರಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಮೃತರ ತಂದೆ ಡಾ. ಎಚ್.ಎಸ್. ಮುದ್ದೇಗೌಡ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!