ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಆರ್ಥಿಕತೆಗೆ ನವಚೈತನ್ಯ ತುಂಬಿದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಿ ಸಣ್ಣ ಉದ್ಯೋಗಗಳ ಮೂಲಕ ಸ್ವಾವಲಂಬನೆಗೆ ಹಾದಿ ಮಾಡಿಕೊಟ್ಟಿದ್ದಕ್ಕಾಗಿ ಇದು ದೇಶಕ್ಕೇ ಮಾದರಿ ಎನಿಸಿದೆ. ಆದರೆ ಇದೇ ಸಮಯದಲ್ಲಿ ಅನರ್ಹರು, ಮತ್ತು ಮೃತರ ಹೆಸರಲ್ಲಿ ಹಣ ದುರ್ಬಳಕೆಯಾಗುತ್ತಿರುವ ದೂರುಗಳು ಯೋಜನೆಯ ಪಾರದರ್ಶಕತೆಗೆ ಧಕ್ಕೆ ತರುತ್ತಿವೆ. ಈ ಸೋರಿಕೆ ತಡೆಯಲು ಸರ್ಕಾರ ಬಯೋಮೆಟ್ರಿಕ್ ಹಾಗೂ ಮುಖ ಚಹರೆ ತಂತ್ರಜ್ಞಾನ ಬಳಸಿ ಮರುಪರಿಶೀಲನೆಗೆ ಮುಂದಾಗಿರುವುದು ಅತ್ಯಂತ ಕಾಲೋಚಿತ ಹಾಗೂ ಪ್ರಶಂಸನೀಯ ಹೆಜ್ಜೆ. ಆದಾಗ್ಯೂ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ತೊಡಕುಗಳಿಂದ ನಿಜವಾದ ಬಡ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಬಾರದು. ಸರ್ಕಾರ ಈ ತಾಂತ್ರಿಕ ಪ್ರಕ್ರಿಯೆಯನ್ನು ಜನಸ್ನೇಹಿಯಾಗಿ ಜರಿಗೆ ತಂದು ಯೋಜನೆಯ ನೈಜ ಉದ್ದೇಶವನ್ನು ಎತ್ತಿಹಿಡಿಯಬೇಕು.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು



