Mysore
23
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ನಕಲಿ ಔಷಧ ತಯಾರಿಕಾ, ಮಾರಾಟ ಜಾಲ ; ವಿದೇಶದಲ್ಲಿ ಕಿಂಗ್‌ಪಿನ್ ಬಂಧನ

ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಹರಡಿದ್ದ ನಕಲಿ ಔಷಧ ಮಾರಾಟ ಜಾಲದ ಕಿಂಗ್ ಪಿನ್, ವಿದೇಶದಲ್ಲಿ ಅಡಗಿದ್ದ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ನಕಲಿ ಔಷಧ ಮಾರಾಟ ಜಾಲದಲ್ಲಿ ಅಂತಾರಾಷ್ಟ್ರೀಯ ನಂಟು ಇರುವುದು ಬಯಲಾಗಿದ್ದು, ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿರುವ ಜಾಲದ ರೂವಾರಿ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಪಶ್ಚಿಮ ಏಷ್ಯಾದ ದೇಶಗಳಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಔಷಧಗಳು ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ರೂ ಮೌಲ್ಯದ ಔಷಧಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಪ್ರಶಾಂತ್ ತನ್ನ ಇಬ್ಬರು ಸಹಚರರ ಮೂಲಕ ಸಂಚು ಹಾಕಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಔಷಧ ಸಾಗಣೆಯನ್ನು ಕಂಡು ಅನುಮಾನಗೊಂಡ ಅಲ್ಲಿನ ಕಸ್ಟಮ್ಸ್ ಅಽಕಾರಿಗಳು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ. ವಿಚಾರಣೆ ವೇಳೆ ಸಹಚರರು ಕಿಂಗ್‌ಪಿನ್ ಪ್ರಶಾಂತ್ ಹೆಸರನ್ನು ಬಾಯಿಬಿಟ್ಟಿದ್ದು, ಅಧಿಕಾರಿಗಳು ತಕ್ಷಣವೇ ಆತನನ್ನೂ ವಶಕ್ಕೆ ಪಡೆದಿದ್ದಾರೆ. ಈ ಮಹತ್ವದ ಸಂಗತಿಯನ್ನು ಪ್ರಶಾಂತ್ ಪತ್ನಿ ಪೊಲೀಸರ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ತಾವರೆಕೆರೆ ಸಿ.ಕೆ.ತಾಂಡ್ಯಾದಲ್ಲಿರುವ ಫಾರ್ಮ್ ಹೌಸ್ ಮೇಲೆ ನಿಖರವಾದ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಔಷಧ ಮರುಪ್ಯಾಕಿಂಗ್ ಘಟಕ ಬಯಲಿಗೆ ಬಂದಿತ್ತು. ಚೆನ್ನೈ , ಹರ್ಯಾಣ, ಚಂಡೀಗಢ ಹಾಗೂ ವಿದೇಶಗಳಿಂದ ಕಡಿಮೆ ಬೆಲೆಗೆ ತರುತ್ತಿದ್ದ ಔಷಧಗಳಿಗೆ ಇಲ್ಲಿ ಪ್ರತಿಷ್ಠಿತ ಕಂಪೆನಿಗಳ ನಕಲಿ ಲೇಬಲ್ ಹಾಗೂ ದುಬಾರಿ ಬೆಲೆಯ ದರಪಟ್ಟಿ ಅಂಟಿಸಿ, ಮಾರುಕಟ್ಟೆಯಲ್ಲಿ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.

ಪೊಲೀಸರು ಈ ಅಡ್ಡೆಯ ಮೇಲೆ ದಾಳಿ ನಡೆಸುವ ಮುನ್ನವೇ ಆಗಸ್ಟ್ ೮ ರಂದೇ ಪ್ರಶಾಂತ್ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದನು. ನಕಲಿ ಔಷಧ ಅಡ್ಡೆ ಮೇಲೆ ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ, ಪ್ರಶಾಂತ್ ತನ್ನ ವ್ಯಾವಹಾರಿಕ ಪಾಲುದಾರ ವೆಂಕಟೇಶ್‌ನನ್ನು ವಿದೇಶಕ್ಕೆ ಕರೆಸಿಕೊಳ್ಳಲು ಏರ್‌ಟಿಕೆಟ್ ಬುಕ್ ಮಾಡಿದ್ದನು, ಆದರೆ ಅದರ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು, ವೆಂಕಟೇಶ್ ಏರ್‌ಪೋರ್ಟ್ ತಲುಪುವ ಮುನ್ನವೇ ಹೆಬ್ಬಾಳ ಸಮೀಪ ಆತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದರು. ಪ್ರಶಾಂತ್ ವಶದಲ್ಲಿರುವ ಬಗ್ಗೆ ತನಿಖಾಽಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಆತನನ್ನು ಭಾರತಕ್ಕೆ ಕರೆತರಲು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂಟರ್‌ಪೋಲ್ ಮೂಲಕ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ.

ಸ್ಥಳದಲ್ಲೇ ತಯಾರಿ
ಕೆಲವೊಂದು ಹೆಸರಿನ ಔಷಧಗಳನ್ನು ಸ್ಥಳದಲ್ಲೇ ತಯಾರಿಸುತ್ತಿದ್ದರು. ಈ ಸಂಬಂಧ ಸಿಕ್ಕ ಖಚಿತ ಮಾಹಿತಿ ಮೇರೆಗೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ದಾಳಿ ಮಾಡಲಾಗಿತ್ತು. ಆರೋಪಿಗಳು ನಕಲಿ ಔಷಧಗಳನ್ನು ಬೆಂಗಳೂರು ಸೇರಿದಂತೆ ವಿವಿಧೆಡೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:
error: Content is protected !!