ಕೊಡಗು: ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಸಿದ್ದಾಪುರ ಸುತ್ತಮುತ್ತ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿಸಿದೆ.
ದುಬಾರೆ ಶಿಬಿರದ ಪ್ರಶಾಂತ, ಸುಗ್ರೀವ, ಲಕ್ಷ್ಮಣ, ಧನಂಜಯ ಹಾಗೂ ಈಶ್ವರ ಎಂಬ ಐದು ಸಾಕಾನೆಗಳ ಸಹಕಾರದೊಂದಿಗೆ ಎಲಿಫ್ಯಂಟ್ ಟ್ರ್ಯಾಪಿಂಗ್ ಮತ್ತು ಸರ್ಚಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅರಣ್ಯ ಅಧಿಕಾರಿಗಳು ಹಾಗೂ ಆರ್ಆರ್ಟಿ ಸಿಬ್ಬಂದಿ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಕಾವಡಿ, ಹಚ್ಚಿನಾಡು, ಕಣ್ಣಗಾಲ, ಹಾಲುಗುಂದ, ಬೈರಂಬಾಡ, ಯಡೂರು, ಕರಡಿಗೋಡು, ಅಮ್ಮತ್ತಿ ಹಾಗೂ ಗುಹ್ಯ ಗ್ರಾಮಗಳ ಸುತ್ತಮುತ್ತ ಕಾರ್ಯಾಚರಣೆ ನಡೆಯುತ್ತಿದೆ.
ಕಾರ್ಯಾಚರಣೆ ವೇಳೆ ಸಾರ್ವಜನಿಕರು ಪಟಾಕಿ ಸಿಡಿಸದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಜನವರಿಯಿಂದ ಇಲ್ಲಿಯವರೆಗೆ ಎಂಟು ತಿಂಗಳಲ್ಲಿ ಕಾಡಾನೆ ದಾಳಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ ಮೂರು ಕಾಡಾನೆ ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದಾಪುರ ವ್ಯಾಪ್ತಿಯ ಸುತ್ತಮುತ್ತ ಕಾಡಾನೆಗಳ ಸೆರೆ ಕಾರ್ಯಾಚರಣೆ ತೀವ್ರಗೊಂಡಿದೆ.




