Mysore
26
broken clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ ಶಕ್ತಿಯುತ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ʻಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಾವು ಶ್ರೀರಾಮನ ಪಾತ್ರದ ಬದಲಿಗೆ ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡ್ರು ಎಂಬುದರ ಕುರಿತು ಮುಕ್ತವಾಗಿ ಮಾತನಾಡಿ ತಮ್ಮ ಖಡಕ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರು, ʻನೀವು ಈ ಚಿತ್ರಕ್ಕೆ ಕೇವಲ ನಟರಷ್ಟೇ ಅಲ್ಲ, ಸಹ-ನಿರ್ಮಾಪಕರೂ ಹೌದು. ಸಿನಿಮಾದ ಮೇಲೆ ನಿಮಗೆ ಸಂಪೂರ್ಣ ಹಿಡಿತವಿರುವಾಗ, ಶ್ರೀರಾಮನ ಪಾತ್ರವನ್ನ ಬಿಟ್ಟು ರಾವಣನ ನೆಗೆಟಿವ್ ಪಾತ್ರವನ್ನೇ ಏಕೆ ಆರಿಸಿಕೊಂಡಿರಿ?ʼ ಎಂದು ಯಶ್ ಅವರನ್ನ ಪ್ರಶ್ನಿಸಿದರು. ಇದಕ್ಕೆ ತಮ್ಮದೇ ಖಡಕ್ ಶೈಲಿಯಲ್ಲಿ ಉತ್ತರಿಸಿದ ಯಶ್, “ಬೆಳ್ಳಿಪರದೆಯ ಮೇಲೆ ಪ್ರಭು ಶ್ರೀರಾಮನ ದೈವಿಕತೆ, ಒಳ್ಳೆಯತನ ಮತ್ತು ಮಹತ್ವವನ್ನ ಪರಿಣಾಮಕಾರಿಯಾಗಿ ಹಾಗೂ ಶಕ್ತಿಯುತವಾಗಿ ತೋರಿಸಬೇಕೆಂದರೆ, ಆತನಿಗೆ ಎದುರಾಗಿ ನಿಲ್ಲುವ ನೆಗೆಟಿವ್ ಪಾತ್ರ ರಾವಣನ ಕೆಟ್ಟತನ ಮತ್ತು ಶಕ್ತಿಯೂ ಅಷ್ಟೇ ಪ್ರಬಲವಾಗಿ ಕಾಣಿಸಿಕೊಳ್ಳಬೇಕಾಗುತ್ತದೆ” ಎಂದು ವಿವರಿಸಿದರು.

ರಜತ್ ಶರ್ಮಾ ಅವರು ನಗುತ್ತಲೇ, ʻಹಾಗಾದರೆ ಕೆಟ್ಟತನವನ್ನ ತೋರಿಸುವ ಗುತ್ತಿಗೆಯನ್ನ ನೀವೇ ತೆಗೆದುಕೊಂಡಿದ್ದೀರಾ?” ಎಂದು ಮರುಪ್ರಶ್ನಿಸಿದಾಗ, ಯಶ್, “ಹೌದು.. ಆ ರಾವಣನ ಆಳ ಮತ್ತು ಪ್ರಭಾವವನ್ನ ನನಗಿಂತ ಉತ್ತಮವಾಗಿ ತೆರೆಯ ಮೇಲೆ ತರಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ನೆಗೆಟಿವ್ ಪಾತ್ರಗಳಲ್ಲಷ್ಟೇ ಅಲ್ಲ, ಪಾಸಿಟಿವ್ ಪಾತ್ರಗಳನ್ನ ಮಾಡಿದಾಗಲೂ ನನಗೆ ಅಷ್ಟೇ ಆತ್ಮವಿಶ್ವಾಸವಿರುತ್ತದೆ. ನನಗಿಂತ ಉತ್ತಮವಾಗಿ ಯಾರೂ ಕಾಣಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.

Tags:
error: Content is protected !!