ಸಿದ್ದಾಪುರ : ಟಿಂಬರ್ ಯೂನಿಯನ್ ಸಭೆಯಲ್ಲಿ ಮಾರಾಮಾರಿ ನಡೆದು ಇಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಆರೋಪದಡಿ ಐವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರದ ವೀರಾಜಪೇಟೆ ರಸ್ತೆಯ ಮಂಟಪವೊಂದರ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಟಿಂಬರ್ ಯೂನಿಯನ್ ಸಭೆ ನಡೆಯುತ್ತಿತ್ತು. ಆ ವೇಳೆ ಸದಸ್ಯತ್ವದ ಹಣದ ವಿಚಾರವಾಗಿ ಸದಸ್ಯರ ನಡುವೆ ವಾಗ್ವಾದ ಉಂಟಾಗಿ, ಅದು ಬಳಿಕ ಗಲಾಟೆಗೆ ತಿರುಗಿದೆ ಎಂದು ತಿಳಿದುಬಂದಿದೆ.
ಟಿಂಬರ್ ವ್ಯಾಪಾರಿಗಳಾದ ಅರ್ಫಾನ್ ಅಹ್ಮದ್ ಹಾಗೂ ಮಹಮ್ಮದ್ ಸಫ್ಘಾನ್ ಅವರಿಗೆ ಟಿಂಬರ್ ಯೂನಿಯನ್ ಸದಸ್ಯರಾದ ಮೂಸಾ, ಸಜಾದ್, ಕಬೀರ್, ಸಿರಾಜ್ ಫಿರೋಜ್ ಸೇರಿ ಚೂರಿ ಹಾಗೂ ಬೈಕ್ ಕೀ ಬಳಸಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನೆಲ್ಲಿಹುದಿಕೇರಿ ಗ್ರಾಮದ ನಿವಾಸಿಯಾದ ಗಾಯಾಳು ಅರ್ಫಾನ್ ಅಹ್ಮದ್ ನೀಡಿದ ದೂರಿನ ಮೇರೆಗೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಾಗಿದ್ದಾರೆ.




