Mysore
27
broken clouds

Social Media

ಬುಧವಾರ, 29 ಏಪ್ರಿಲ 2026
Light
Dark

ಹನೂರು: ಅಲಗುಮೂಲೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಕೊಂಡೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ ಅಲಗುಮೂಲೆ ಗ್ರಾಮದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಕೆಂಡಗಣ್ಣಸ್ವಾಮಿ, ಶ್ರೀ ಮಲ್ಲೇಶ್ವರ ಸ್ವಾಮಿಯ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕೊಂಡೋತ್ಸವದ ಹಿನ್ನೆಲೆಯಲ್ಲಿ ಈ ನಾಲ್ಕೂ ದೇಗುಲಗಳು ಹಾಗೂ ಗ್ರಾಮವನ್ನು ತಳಿರು-ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 6.30 ರಿಂದ 9 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಶ್ರೀ ಕೆಂಡಗಣ್ಣಸ್ವಾಮಿ ದೇಗುಲದಲ್ಲಿ ಕಳಸ ಪೂಜೆ, ರುದ್ರಾ ಭಿಷೇಕ, ಗಣಪತಿ ಹೋಮ, ರುದ್ರಹೋಮ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ ನೆರವೇರಿಸಿ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು.

11ರ ವೇಳೆಯಲ್ಲಿ ಉಪವಾಸವಿದ್ದ ಅರ್ಚಕರು ಹಾಗೂ ಗ್ರಾಮಸ್ಥರು ಸಮೀಪದ ಅರಣ್ಯ ಪ್ರದೇಶದಲ್ಲಿನ ಮುಂಬೆಟ್ಟದ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿ ಗ್ರಾಮದ ಬಸವನಗುಡಿಗೆ ಆಗಮಿಸಿದರು.

ಸಂಜೆ 4ರ ವೇಳೆಯಲ್ಲಿ ಬಸವನಗುಡಿಯಲ್ಲಿ ಕಾಮಗೆರೆ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಹೊಂಡರಬಾಳುವಿನ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯ ಹಾಗೂ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸತ್ತಿಗೆ, ಸೂರಿಪಾಣಿ, ಬಿರುದು ಬಾವಲಿ ಹಾಗೂ ನಂದಿಧ್ವಜ ಕಂಭಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಯ ವಾದ್ಯಮೇಳದೊಂದಿಗೆ ಕೊಂಡವನ್ನು ಹಾಯುವ ಅರ್ಚಕರನ್ನು ಬಸವ ಉತ್ಸವ ಮೂರ್ತಿಯ ವಾಹನ ದೊಂದಿಗೆ ಗ್ರಾಮದ ಕೆಂಡಗಣ್ಣಸ್ವಾಮಿ ಗದ್ದುಗೆಗೆ ಮೆರವಣಿಗೆಯ ಮೂಲಾ ಕರೆತರಲಾಯಿತು.

ವಿಜೃಂಭಣೆಯ ಕೊಂಡೋತ್ಸವ ಸಂಜೆ 6ರ ವೇಳೆಯಲ್ಲಿ ಕೆಂಡಗಣ್ಣಸ್ವಾಮಿ ಗದ್ದಿಗೆ ಮುಂಭಾಗ ಸಿದ್ಧಪಡಿಸಿದ್ದ ಕೊಂಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅರ್ಚಕರು ವೀರಾವೇಶದಿಂದ ಕೊಂಡ ಹಾಯ್ದರು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರು ಘೋಷಣೆ ಕೂಗುತ್ತ ಕೊಂಡವನ್ನು ಹಾಯುವವರಲ್ಲಿ ಉತ್ಸಾಹ ಮೂಡಿಸಿದರು.

ಕೊಂಡೋತ್ಸವದಲ್ಲಿ ಹನೂರು ತಾಲೂಕಿನ ವಿವಿಧ ಗ್ರಾಮದ ಭಕ್ತರು ಸೇರಿದಂತ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನದ ಹಾಗೂ ಇತರ ಜಿಲ್ಲೆಗಳ ಭಕ್ತರು ಭಾಗಿಯಾಗಿದ್ದರು. ದೇಗು ವತಿಯಿಂದ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಗ್ರಾಪಂ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಹನೂರು ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಮಂಗಳವಾರ ಬಸವ ವಾಹನ, ಸತ್ತಿಗೆ, ಸತ್ತಿಗೆ, ಸೂರಿಪಾನಿ ಶ್ರೀಮಲ್ಲೇಶ್ವರ ಸ್ವಾಮಿ ಬಿರುದು ಬಾವಲಿಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.

 

Tags:
error: Content is protected !!