ಮುಂಬೈ: ನಿಮ್ಮ ಧರ್ಮ ಯಾವುದು ಎಂದು ಕೇಳಿ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ.
ಇಲ್ಲಿನ ಮೀರಾ ರಸ್ತೆ ಪೂರ್ವದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಭದ್ರತಾ ಸಿಬ್ಬಂದಿಗಳಾದ ರಾಜ್ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಜೈಬ್ ಜುಬೈರ್ ಅನ್ಸಾರಿ ಎಂದು ಗುರುತಿಸಲಾದ ಆರೋಪಿಯು ಧರ್ಮದ ಬಗ್ಗೆ ಮತ್ತು ನೀವು ಕಲ್ಮಾ (ಇಸ್ಲಾಮಿಕ್ ನಂಬಿಕೆಯ ಘೋಷಣೆ) ಪಠಿಸಬಹುದೇ ಎಂದು ಕೇಳಿದ ನಂತರ ಅವರನ್ನು ಚಾಕುವಿನಿಂದ ಇರಿದ ಆರೋಪದ ಮೇಲೆ 31 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಅನ್ಸಾರಿಯು ಕಾವಲುಗಾರರನ್ನು ನೋಡಿ ಅವರ ಹೆಸರು ಮತ್ತು ಧರ್ಮವನ್ನು ಕೇಳಿದಾಗ ಅವರು ಉತ್ತರಿಸಿದ್ದರು. ನಂತರ ಅವರು ಕಲ್ಮಾವನ್ನು ಓದಬಹುದೇ ಎಂದು ಕೇಳಿದರು. ಕಾವಲುಗಾರರು ತಮಗೆ ಓದಲು ಸಾಧ್ಯವಿಲ್ಲ ಎಂದು ಹೇಳಿದಾಗ, ತನ್ನ ಬಳಿನ ಇದ್ದ ಚಾಕುವನ್ನು ಹೊರತೆಗೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಿಶ್ರಾ ಅವರ ಕರುಳಿಗೆ ಹಾನಿ ಸೇರಿದಂತೆ ಗಂಭೀರ ಗಾಯಗಳಾಗಿದ್ದರೆ, ಸೇನ್ ಅವರ ಬೆನ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾಳಿಯ ನಂತರ ಸೇನ್ ಭದ್ರತಾ ಕ್ಯಾಬಿನ್ ಒಳಗೆ ಅಡಗಿಕೊಳ್ಳುವಲ್ಲಿ ಯಶಸ್ವಿಯಾದ.
ಕಾವಲುಗಾರರ ಮೇಲೆ ಹಲ್ಲೆ ನಡೆಸಿದ ನಂತರ ಅನ್ಸಾರಿ ಸ್ಥಳದಿಂದ ಪರಾರಿಯಾಗಿದ್ದ. ಸೇನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ವೋಕಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವಲುಗಾರರ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





