Mysore
34
scattered clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಗಾರೆ ಕೆಲಸ ಮಾಡುವವರ ಪುತ್ರಿಗೆ ಸಾಧಿಸುವ ಛಲ

ಮೈಸೂರು : ಎಲ್ಲ ಅನುಕೂಲತೆಗಳಿದ್ದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎನ್ನುವ ವಿದ್ಯಾರ್ಥಿಗಳ ನಡುವೆ, ಗಾರೆ ಕೆಲಸ ಮಾಡುವವರ ಪುತ್ರಿಯೊಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದ ಗಾರೆ ಕೆಲಸಗಾರ ಅಂಕಯ್ಯ ಹಾಗೂ ಲಕ್ಷ್ಮೀ ದಂಪತಿ ಪುತ್ರಿಯಾಗಿರುವ ಚೌಡಮ್ಮ ಈ ಸಾಧನೆ ಮಾಡಿದ್ದಾರೆ. ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಆಕೆ ನಿರೂಪಿಸಿದ್ದಾರೆ. ನಗರದ ಅಗ್ರಹಾರದಲ್ಲಿನ ನಟರಾಜ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯಾದ ಚೌಡಮ್ಮ ೬೦೦ಕ್ಕೆ ೫೭೦ ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.

ಚೌಡಮ್ಮ ಅವರ ತಂದೆ ಅಂಕಯ್ಯ ಅವರು ಗಾರೆ ಕೆಲಸದ ಸಂಪಾದನೆಯ ಹಣದಿಂದ ಮಗಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಗ್ರಾಮಿಣ ಭಾಗದ ಬಡ ಹುಡುಗಿಯಾದ ಚೌಡಮ್ಮಗೆ ಕಡಿಮೆ ಶುಲ್ಕದಲ್ಲಿ ನಟರಾಜ ಕಾಲೇಜಿನ ಆಡಳಿತ ಮಂಡಳಿ ಪ್ರವೇಶಾತಿ ನೀಡಿ ಮಾನವೀಯತೆ ಮೆರೆದಿದೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದ ಚೌಡಮ್ಮ, ಆತ್ಮ ವಿಶ್ವಾಸದಿಂದಲೇ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಅಂತರ್ಜಾಲದ ಮೂಲಕ ತನ್ನ -ಲಿತಾಂಶವನ್ನು ವೀಕ್ಷಿಸಿದ ಚೌಡಮ್ಮ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿರುವುದನ್ನು ಕಂಡು ಖುಷಿಯಾಗಿದ್ದಾರೆ.

ಪ್ರತಿದಿನ ಕಾಲೇಜಿಗೆ ಬರುವ ಮುನ್ನ ಆಕೆ ತನ್ನ ಅಣ್ಣ ನಡೆಸುತ್ತಿದ್ದ ಪಾನೀಪುರಿ ತಯಾರಿಕೆಗೆ ಬೇಕಾದ ಸಾಮಗ್ರಿಗಳನ್ನು ಸಿದ್ಧಗೊಳಿಸಿಕೊಟ್ಟು ಬರುತ್ತಿದ್ದರು. ಸಂಜೆ ಕೂಡ ಅಣ್ಣನಿಗೆ ಸಹಕಾರ ನೀಡುತ್ತಿದ್ದರು. ಕೆಲಸವೆಲ್ಲಾ ಮುಗಿದ ನಂತರ ಓದುತ್ತಿದ್ದ ಆಕೆ ಮಲಗುತ್ತಿದ್ದುದು ರಾತ್ರಿ ೧೨ ಗಂಟೆಗೆ, ಮತ್ತೆ ಮುಂಜಾನೆ ಬೇಗ ಎದ್ದು ಓದುತ್ತಿದ್ದುದನ್ನು ಹೆಮ್ಮೆಯಿಂದಲೇ ಹಂಚಿಕೊಳ್ಳುತ್ತಾರೆ.

ತಮ್ಮ ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂದು ಬಯಸುವ ಪೋಷಕರು, ಮಕ್ಕಳು ಕೇಳಿದಾಗ ಹಣ, ದ್ವಿಚಕ್ರ ವಾಹನ ಮುಂತಾದ ಎಲ್ಲ ಸೌಲಭ್ಯಗಳನ್ನು ಒದಗಿಸಿದರೂ ಕಠಿಣ ಶ್ರಮದ ಕೊರತೆಯಿಂದ ವಿದ್ಯಾಭ್ಯಾಸದಲ್ಲಿ ವಿಫಲವಾಗುವ ವಿದ್ಯಾರ್ಥಿಗಳಿಗೆ ಚೌಡಮ್ಮ ಮಾದರಿ ಎನಿಸಿದ್ದಾರೆ. ಮುಂದೆ ಉನ್ನತ ವ್ಯಾಸಂಗ ಮಾಡುವ ಆಸಕ್ತಿ ಇದೆ. ಆದರೆ, ಕಾಲೇಜು ಶುಲ್ಕವನ್ನು ಕಟ್ಟುವ ಶಕ್ತಿ ನಮ್ಮ ಕುಟುಂಬಕ್ಕಿಲ್ಲ. ಬ್ಯಾಂಕ್‌ನಲ್ಲಿ ಸಾಲ ಪಡೆಯಲು ನಮ್ಮ ಬಳಿ ಯಾವುದೇ ಆಸ್ತಿ ಇಲ್ಲ. ಹೀಗಾಗಿ ಪದವಿ ವ್ಯಾಸಂಗಕ್ಕೆ ಓದನ್ನು ಸೀಮಿತಗೊಳಿಸಲು ನಿರ್ಧರಿಸಿದ್ದೇನೆ ಎಂದು ಚೌಡಮ್ಮ ಹೇಳುತ್ತಾರೆ.

Tags:
error: Content is protected !!