Mysore
27
light rain

Social Media

ಭಾನುವಾರ, 02 ಆಗಸ್ಟ್ 2026
Light
Dark

ಚಿರತೆ ದಾಳಿ: ಕೂಲಿ ಕಾರ್ಮಿಕನಿಗೆ ಗಾಯ

ಹುಣಸೂರು: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ಕಣಗಾಲು ಗ್ರಾಮದ ಬಳಿಯ ಕಂಪ್ಲಾಪುರ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ ಕಣಗಾಲು ಗ್ರಾಮದ ಮಾದೇಶ್ ನಾಯಕ (೪೦ ವರ್ಷ) ಚಿರತೆ ದಾಳಿಯಿಂದ ಗಾಯಗೊಂಡವರು. ಇವರು ಎಂದಿನಂತೆ ಜಮೀನುಗಳಲ್ಲಿರುವ ಬೂರುಗದ ಮರಗಳಲ್ಲಿ ಮರಾಟ್ ಮೊಗ್ಗು ಸಂಗ್ರಹಿಸಲು ತೆರಳಿದ್ದ ವೇಳೆ ಹಿಂದಿನಿಂದ ಚಿರತೆ ದಾಳಿ ನಡೆಸಿ ಕುತ್ತಿಗೆಯನ್ನು ಹಿಡಿದಿದೆ. ಈ ವೇಳೆ ಆತ ಕಿರುಚಿಕೊಂಡಿದ್ದು, ಆತನ ಕೂಗಾಟ ಕೇಳಿದ ಅಕ್ಕಪಕ್ಕದ ಜಮೀನುಗಳಲ್ಲಿದ್ದ ರೈತರು ಸ್ಥಳಕ್ಕೆ ಆಗಮಿಸಿ ಕೂಗಾಟ ನಡೆಸಿದ್ದರಿಂದ ಹೆದರಿದ ಚಿರತೆ ಮಾದೇಶನನ್ನು ಬಿಟ್ಟು ಓಡಿಹೋಗಿದೆ.

ತಕ್ಷಣವೇ ಗಾಯಾಳುವನ್ನು ಹತ್ತಿರದ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಸಂಜೆ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರಿಯಾಪಟ್ಟಣ ಪ್ರಾದೇಶಿಕ ಅರಣ್ಯ  ವಿಭಾಗದ ಡಿಆರ್‌ಎ-ಒ ಪಾರ್ವತಿ ಪಿರಿಯಾಪಟ್ಟಣ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗಾಯಾಳುವಿನ ವೆಚ್ಚವನ್ನು ಇಲಾಖೆಯಿಂದಲೇ ಭರಿಸಲಾಗುವುದು ಎಂದು ಡಿಸಿಎಫ್‌ ಕಿರುಬನಾಥನ್ ತಿಳಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸದ ಇಲಾಖೆ: ಆದರೆ, ಗಾಯಾಳುವನ್ನು ಕೆ.ಆರ್.ಆಸ್ಪತ್ರೆಗೆ ಕಳುಹಿಸಿ ಕೈತೊಳೆದುಕೊಂಡಿರುವ ಅರಣ್ಯ ಸಿಬ್ಬಂದಿ ಜೊತೆಗೂ ಹೋಗಿಲ್ಲ, ಗಾಯಾಳು ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿದ್ದು, ಅರಣ್ಯ ಇಲಾಖೆ ಹಣಕಾಸಿನ ನೆರವನ್ನೂ ನೀಡಿಲ್ಲವೆಂದು ಗಾಯಾಳು ಸಹೋದರ ತ್ಯಾಗರಾಜ್ ನೋವು ತೋಡಿ ಕೊಂಡಿದ್ದಾರೆ. ಈ ಬಗ್ಗೆ ಆರ್‌ಎಪ್‌ಓ ಪದ್ಮಶ್ರೀ ಅವರನ್ನು ಪ್ರಶ್ನಿಸಿದಾಗ ತಾವು ಹುಣಸೂರಿನಲ್ಲಿದ್ದು, ಸಿಬ್ಬಂದಿಯನ್ನು ಕಳುಹಿಸಿದ್ದು, ಗಾಯಾಳು ಸಹೋದರನ ಖಾತೆಗೆ ಹಣ ಹಾಕುವುದಾಗಿ ತಿಳಿಸಿದ್ದಾರೆ.

Tags:
error: Content is protected !!