Mysore
22
light rain

Social Media

ಭಾನುವಾರ, 22 ಫೆಬ್ರವರಿ 2026
Light
Dark

ಸಿಎಸ್‌ ಹೆಸರು ಪ್ರಸ್ತಾಪಿಸಿದ್ದಕ್ಕೆ ಕ್ಷಮೆ : ಸ್ನೇಹಮಯಿ ಕೃಷ್ಣ ಸ್ಪಷ್ಟನೆ

ಮೈಸೂರು : ಮುಡಾ ಆಯುಕ್ತ ನಟೇಶ್ ಅವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ನಾನು ಕ್ಷಮೆ ಕೋರಿಲ್ಲ. ಕೇವಲ ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರನ್ನು ಉಲ್ಲೇಖ ಮಾಡಿದ್ದಕ್ಕಾಗಿ ಕ್ಷಮೆ ಕೇಳಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸ್ಪಷ್ಟ ಪಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಆರೋಪ ಮಾಡಿರುವ ಎಲ್ಲಾ ವಿಚಾರವನ್ನು ಒಪ್ಪಿಕೊಂಡು, ಅದಕ್ಕೆ ಪೂರಕವಾಗಿ ಎಲ್ಲಾ ಮಾಹಿತಿ, ಸಾಕ್ಷ್ಯಾಧಾರಗಳನ್ನು ನೀಡಿದ್ದ ವಿನೋದ್ ಈ ಒಂದು ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾನೆ. ನಟೇಶ್ ರವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಪ್ರಭಾವಿಗೆ ಲಂಚ ಕೊಟ್ಟಿರುವುದು ನಿಜ ಎಂದು ಒಪ್ಪಿಕೊಂಡಿದ್ದಾನೆ, ಅದಕ್ಕೆ ಪೂರಕವಾಗಿ ಕೆಲವು ಸಾಕ್ಷ್ಯಾಧಾರಗಳನ್ನು ನೀಡಿದ್ದಾನೆ, ಅದನ್ನು ಆಧರಿಸಿ, ತನಿಖೆ ನಡೆಸಿದಾಗ, ಪ್ರಭಾವಿ ಯಾರು? ಎಂಬ ಸತ್ಯ ತಿಳಿಯುತ್ತದೆ ಎಂದಿದ್ದಾರೆ.

14 ನಿವೇಶನಗಳನ್ನು ಕಾನೂನು ಬದ್ದವಾಗಿ ಪಡೆದಿದ್ದೇವೆ ಎಂದು ವಿಧಾನಸೌಧದಲ್ಲೇ ಆರ್ಭಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾನು ಪ್ರಕರಣ ದಾಖಲು ಮಾಡುತ್ತಿದ್ದಂತೆ ತಮ್ಮ ತಪ್ಪನ್ನು ಒಪ್ಪಿಕೊಂಡು, 14 ನಿವೇಶನಗಳನ್ನು ವಾಪಾಸ್ಸು ಕೊಟ್ಟಿದ್ದಕ್ಕಿಂತ ದೊಡ್ಡ ತಪ್ಪನ್ನು ನಾನು ಮಾಡಿರುವುದಿಲ್ಲ, ನಡೆಯುವಾಗ ಕೆಲವು ಸಲ ಎಡವುದು ಸಹಜ ಎಂದಿದ್ದಾರೆ.

ಸೈಬರ್ ಠಾಣಾ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಬೆಂಬಲಕ್ಕೆ ನಿಂತ ಮಾಧ್ಯಮದವರಿಗೆ, ರಾಜ್ಯದ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು, ಸಮಾಜದ ಹಿತಕ್ಕಾಗಿ ದುಡಿಯುತ್ತೇನೆ ಎಂದು ತಿಳಿಸಿದ್ದಾರೆ.

Tags:
error: Content is protected !!