Mysore
20
scattered clouds

Social Media

ಗುರುವಾರ, 05 ಫೆಬ್ರವರಿ 2026
Light
Dark

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ ಮೈಸೂರು ವಿ.ವಿ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದವತಿಯಿಂದ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.

ಗುರುವಾರ ಮಾನಸಗಂಗೋತ್ರಿಯ ಕ್ಲಾಕ್ ಟವರ್‌ನ ಬಳಿ ಜಮಾವಣೆಗೊಂಡ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಯುಜಿಸಿಯ ಹೊಸ ನಿಯಮಾವಳಿಯನ್ನು ಬೆಂಬಲಿಸಿ, ಜಾರಿ ಮಾಡುವಂತೆ ಘೋಷಣೆ ಕೂಗಿದರು.

ಇಂದಿನ ಎಐ ಕಾಲದಲ್ಲೂ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಾನಾ ಸ್ವರೂಪದ ಶೋಷಣೆಯನ್ನು ತಡೆಗಟ್ಟಲು ಯುಜಿಸಿ ತನ್ನ ವ್ಯಾಪ್ತಿಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ಕೆಲವು ಸಂಘಟನೆಗಳವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧ ಯಾಕೆ ಎಂದು ಪ್ರಶ್ನಿಸಿದರು.

ಹಾಗಾದರೆ ಕ್ಯಾಂಪಸ್‌ಗಳಲ್ಲಿ ಶೋಷಣೆ ಇಲ್ಲವೇ? ರೋಹಿತ್ ವೇಮುಲ ಆತ್ಮಹತ್ಯೆಗೆ ಕಾರಣ ಏನು? ಅರ್ಟಿಕಲ್ 17 ಇದ್ದರೂ ಅಸ್ಪೃಶ್ಯತೆ ಇಲ್ಲವೇ? ಈ ನಿಯಮಾವಳಿಯನ್ನು ವಿರೋಧಿಸಲು ನ್ಯಾಯಯುತ ಕಾರಣ ಏನು? ಎಂದು ಪ್ರಶ್ನಿಸಿದರು.

ಕ್ಯಾಂಪಸ್‌ಗಳು ಸಮಾನತೆ ಬಿತ್ತುವ ಕೇಂದ್ರಗಳಾಗಬೇಕು. ಶೋಷಣೆ ರಹಿತವಾಗಿರಬೇಕು. ಇದು ಕಲಿತ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಭವಿಷ್ಯದ ಸ್ವಸ್ಥ ಸಮಾಜಕ್ಕೆ ಕಾರಣವಾಗುತ್ತದೆ. ಸಮಾನತೆಯ ಭಾರತ ನನಸಾಗಲು ಈ ನಿಯಮಾವಳಿಗಳು ಕಾರಣ ಆಗುತ್ತದೆ ಎಂದು ಹೇಳಿದರು.

ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ, ಗೌರವಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ಉಪಾಧ್ಯಕ್ಷ ಮಲ್ಲೇಶ್ ಬಾಚಹಳ್ಳಿ, ಕಾರ್ಯಾಧ್ಯಕ್ಷ ರೋಹನ್ ಹೊಂಗನೂರು, ಸದಸ್ಯರಾದ ಮಾದೇಶ್ ಸೀಗಿ, ಕಿರಣ್, ಡಾ. ಪ್ರತಾಪ್ ಕವಲಂದೆ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರ ಚಿನ್ನಸ್ವಾಮಿ, ಒಕ್ಕೂಟದ ಗೌರವಾಧ್ಯಕ್ಷ ಶಿವು ಕೋಟೆ, ಕಾರ್ಯದರ್ಶಿ ಗೌತಮ್,ಒಕ್ಕೂಟದ ಸದಸ್ಯರಾದ ಪ್ರವೀಣ್, ಕಿಶೋರ್, ಮಹಾದೇವಸ್ವಾಮಿ, ಅಪ್ಪು, ಅಭಿ, ಸಿದ್ದರಾಜು, ಮನೋಜ್, ಸುಭಾಷ್, ಸಚಿನ್ ಬಸವರಾಜು, ನವೀನ್ ಕೋಳೂರು, ಅಭಿಜಿತ್ ಮತ್ತಿತರರು ಹಾಜರಿದ್ದರು.

Tags:
error: Content is protected !!