ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ ಘಟನೆ ಜರುಗಿದೆ.
ತಾಲೂಕಿನ ಕೂಡ್ಲೂರು ಗ್ರಾಮದ ರೈತ ಮಾದಪ್ಪ ಗಾಯಗೊಂಡವರಾಗಿದ್ದಾರೆ.
ಘಟನೆಯ ವಿವರ
ಭಾನುವಾರ ತಡರಾತ್ರಿ ಅಜ್ಜೀಪುರ ಸಮೀಪ ಟವರ್ ಕುಸಿದು ಬಿದ್ದಿದ್ದರಿಂದ ಹಲವು ಗ್ರಾಮಗಳಿಗೆ ನಿರಂತರವಾಗಿ 18 ಗಂಟೆ ವಿದ್ಯುತ್ ಸಂಪರ್ಕವಿರಲಿಲ್ಲ. ಹೀಗಾಗಿ ರೈತ ಮಾದಪ್ಪ ತಮ್ಮ ಜಮೀನಿನಲ್ಲಿ ಬೆಳಗಿದ್ದ ಬೆಳೆಗಳೆಲ್ಲ ಒಣಗುತ್ತಿದ್ದರಿಂದ ರಾತ್ರಿ ವೇಳೆ ನೀರು ಹಾಯಿಸಲು ತೆರಳಿದ್ದಾರೆ. ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ರೈತ ಮಾದಪ್ಪ ಅವರ ಕಾಲು ಮುರಿದು ತೀವ್ರವಾಗಿ ಗಾಯಗೊಂಡಿದ್ದಾರೆ. ರೈತನ ಚಿರಾಟ ಕೇಳಿ ಸಮೀಪದ ರೈತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಒಂದೇ ತಿಂಗಳಿನಲ್ಲಿ ಮೂರು ಬಾರಿ ಆನೆ ದಾಳಿ
ಕಳೆದ ಡಿಸೆಂಬರ್ 18ರಂದು ಬಾಳೆಗೊನೆ ಕಟಾವು ಕೆಲಸ ಮುಗಿಸಿ ಸ್ವ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಾಕನಪಾಳ್ಯ ಗ್ರಾಮದ ನಿವಾಸಿ ಶಿವಮೂರ್ತಿ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದ.
ಇದಾದ ನಂತರ ಜನವರಿ 5 ರಂದು ಜಮೀನಿನಲ್ಲಿ ಮಲಗಿದ್ದ ಜಲ್ಲಿ ಪಾಳ್ಯ ಗ್ರಾಮದ ಚಿನ್ನಪ್ಪ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಎಡಕಾಲು ಮುರಿದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಜನವರಿ ಹದಿನಾಲ್ಕರಂದು ಕೂಡ್ಲೂರು ಗ್ರಾಮದ ಮಾದಪ್ಪ ಎಂಬುವವರ ಮೇಲೆ ಮತ್ತೊಮ್ಮೆ ಆನೆ ದಾಳಿ ನಡೆಸಿದ ಪರಿಣಾಮ ಕಾಲುಮುರಿದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇನ್ನು ಮುಂತಾದರು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕಾಡಾನೆಯನ್ನು ಹಿಡಿದು ಸ್ಥಳಾಂತರ ಮಾಡುವರೆ ಕಾಲು ನೋಡಬೇಕಿದೆ.
ಒಂದು ತಿಂಗಳಿನಲ್ಲಿ ಮೂರು ಬಾರಿ ಕಾಡಾನೆ ದಾಳಿ ನಡೆದು ಇಬ್ಬರಿಗೆ ಕಾಲು ಮುರಿದರೆ ಒಬ್ಬ ಮೃತಪಟ್ಟಿದ್ದಾನೆ. ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಹಾವಳಿ ನಿಯಂತ್ರಿಸಲು ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದಾದರು ಅನಾಹುತ ಸಂಭವಿಸಿದರೆ ಇದಕ್ಕೆ ತಮಿಳುನಾಡು ಮತ್ತು ಹೂಗ್ಯಂ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಗಾಯಗೊಂಡಿರುವ ಇಬ್ಬರೂ ರೈತರಿಗೂ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಬೇಕು ಇಲ್ಲದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಅಧ್ಯಕ್ಷ ಅಮ್ಜದ್ ಖಾನ್ ಪತ್ರಿಕೆಗೆ ತಿಳಿಸಿದ್ದಾರೆ.
ಈ ಕುರಿತು ಆಂದೋಲನದೊಂದಿಗೆ ಮಾತನಾಡಿದ ಹೂಗ್ಯಂ ವಲಯ ಅರಣ್ಯಾಧಿಕಾರಿ ಜಿತೇಂದ್ರ, ಈಗಾಗಲೇ ಕಾಡಾನೆ ಹಾವಳಿ ನಿಯಂತ್ರಿಸಲು ಇಟಿಎಫ್ ತಂಡ ಸ್ಥಳಕ್ಕೆ ಆಗಮಿಸಿದ್ದು ಡ್ರೋನ್ ಮುಖಾಂತರ ಮಾನಿಟರ್ ಮಾಡಲಾಗುತ್ತಿದೆ. ಆನೆ ಚಲನವಲದ ನಿಗಾ ಇಡಲಾಗಿದ್ದು ಮೂವರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಗಾಯಗೊಂಡಿರುವ ರೈತರಿಗೆ ಚಿಕಿತ್ಸೆ ವೆಚ್ಚವನ್ನು ಅರಣ್ಯ ಇಲಾಖೆಯಿಂದಲೇ ಭರಿಸಲಾಗುವುದು, ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಸಬ್ಸಿಡಿ ದರದಲ್ಲಿ ರೈತರಿಗೆ ಸೋಲಾರ್ ಪೆನ್ಸಿಂಗ್ ವಿಚಾರಣೆ ಮಾಡಲು ಕ್ರಮವಹಿಸಲಾಗುವುದು ಎಂದಿದ್ದಾರೆ.





