ಮೈಸೂರಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಜಿಲ್ಲಾ ಹಾಪ್ಕಾಪ್ಸ್ನಿಂದ ಅರಮನೆ ಕಡೆಗೆ ತೆರಳುವ ಪಾದಚಾರಿ ರಸ್ತೆಯಲ್ಲಿ ಚಪ್ಪಡಿ ಕಲ್ಲುಗಳು ಕಿತ್ತುಬಂದು ಬಾಯ್ದೆರೆದು ಕೊಂಡಿವೆ. ಈ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ರಾತ್ರಿಯ ವೇಳೆಯಂತೂ ಚಪ್ಪಡಿ ಕಲ್ಲುಗಳು ಮೇಲೆದ್ದು ಬಂದಿರುವುದು ಕಾಣಿಸದೇ ಆಯತಪ್ಪಿ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಸರಾಕ್ಕೆ ಕ್ಷಣಗಣನೆ ಶುರುವಾಗಿದೆ.
ಜನಪ್ರತಿನಿಧಿಗಳಿಗೆ ಇದರ ಅರಿವೇ ಇಲ್ಲ ಎನ್ನುವಂತಾಗಿದೆ. ದಸರಾ ಜಂಬೂ ಸವಾರಿ ಈ ಮಾರ್ಗದಲ್ಲೇ ಹಾದು ಹೋಗಲಿದ್ದು, ಇಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆಸನ ಗಳನ್ನು ಅಳವಡಿಸಲಾಗುತ್ತದೆ. ಆದ್ದರಿಂದ ಜನಪ್ರತಿನಿಧಿಗಳು ಚಪ್ಪಡಿ ಕಲ್ಲುಗಳನ್ನು ಆದಷ್ಟು ಬೇಗ ಸರಿಪಡಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು



