ಬೆಂಗಳೂರು: ಧರ್ಮಸ್ಥಳದ ವಿಚಾರವಾಗಿ ಸತ್ಯಾಂಶವನ್ನು ಜನಸಮುದಾಯಕ್ಕೆ ತಿಳಿಸುವುದು ಸರ್ಕಾರದ ಉದ್ದೇಶ. ಅದರ ಹೊರತಾಗಿ ನಮ್ಮ ಬಳಿ ಯಾವುದೇ ಗುಪ್ತ ಕಾರ್ಯ ಸೂಚಿಗಳಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿ ತನಿಖೆ ಗಂಭೀರ ಸ್ವರೂಪದಲ್ಲಿ ನಡೆಯುತ್ತಿದೆ. ಕೋಟ್ಯಂತರ ಭಕ್ತರ ಭಾವನೆಗಳಿಗೆ ಅನುಗುಣವಾಗಿ ಎಸ್ಐಟಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದೆ ಎಂದರು.
ಚಿನ್ನಯ್ಯನ ಬಂಧನದ ಬಳಿಕ ಆತ ನೀಡಿದ ಹೇಳಿಕೆ ಹಾಗೂ ಬೆಳವಣಿಗೆಗಳ ಮೇಲೆ ತನಿಖೆ ಮುಂದುವರೆಯುತ್ತಿದೆ. ಆದಷ್ಟು ಶೀಘ್ರವಾಗಿ ಇದು ಪೂರ್ಣಗೊಂಡು ವರದಿ ಮಂಡನೆಯಾಗಬೇಕು. ಜನರಿಗೆ ಸತ್ಯಾಂಶ ತಿಳಿಯಬೇಕು ಎಂಬುವುದು ನಮ್ಮ ಉದ್ದೇಶ ಎಂದರು.
ಎಸ್ಐಟಿ ರಚಿಸಿದ್ದು, ಹೂತಿಡಲಾದ ಶವಗಳ ತನಿಖೆ ಮಾಡಲು ಈಗ ಅದಕ್ಕೆ ವಿರುದ್ಧವಾಗಿ ಚಿನ್ನಯ್ಯನನ್ನು ಬಂಧಿಸಿ ತನಿಖೆ ಮಾಡಲಾಗುತ್ತಿದೆ ಎಂಬ ಆರೋಪಗಳು ಸರಿಯಲ್ಲ. ನಾವು ಯಾವುದೇ ಪೂರ್ವಗ್ರಹ ಪೀಡಿತರಾಗಿಲ್ಲ. ಎಸ್ಐಟಿ ಅಧಿಕಾರಿಗಳು ಇದೇ ರೀತಿಯ ತನಿಖೆ ಮಾಡಬೇಕು, ಇಂತವರ ಮೇಲೆ ದಾಳಿ ಮಾಡಬೇಕು ಎಂದು ನಾವು ಸೂಚನೆ ನೀಡಿಲ್ಲ.
ಈಗಾಗಲೇ ನೀಡಲಾಗಿರುವ ಕಾರ್ಯಸೂಚಿಯ ಇತಿಮಿತಿಯಲ್ಲಿ ಎಸ್ಐಟಿ ಅಧಿಕಾರಿಗಳು ಎಲ್ಲೆಲ್ಲಿ ಶೋಧ ಮಾಡಬೇಕು, ಯಾರನ್ನು ಬಂಧಿಸಬೇಕು, ಎಲ್ಲಿ ದಾಳಿ ಮಾಡಬೇಕೆಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಿದರು.





