ಬೆಂಗಳೂರು: ಕಾಂಗ್ರೆಸ್ ಯಾವತ್ತೂ ಹಿಟ್ ಅಂಡ್ ರನ್ ಮಾಡೋದಿಲ್ಲ. ಕರ್ನಾಟಕದಲ್ಲಿ ಮತಗಳ್ಳತನದ ಬಗ್ಗೆ ದಾಖಲಾತಿ ಇದೆ. ಅದನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರಾಹುಲ್ ಗಾಂಧಿ ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡುತ್ತಾರೆ. ದೆಹಲಿಯಲ್ಲಿ ಮತಗಳ್ಳತನ ದಾಖಲೆ ಬಿಡುಗಡೆ ಮಾಡಲಾಗುತ್ತದೆ. ಅದಾದ ಮೇಲೆ ಚುನಾವಣಾ ಆಯೋಗ ಯಾರ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದೆ ಎಂದು ನೀವೇ ತೀರ್ಮಾನ ತೆಗೆದುಕೊಳ್ಳಿ. ಇವತ್ತು ದಾಖಲೆ ಬಿಡುಗಡೆ ಮಾಡುತ್ತಾರೆ. ಆಗಸ್ಟ್.8ರಂದು ಕರ್ನಾಟಕದಲ್ಲಿ ದಾಖಲಾತಿ ಬಿಡುಗಡೆ ಮಾಡುತ್ಥಾರೆ ಎಂದು ತಿಳಿಸಿದರು.
ಇನ್ನು ಪ್ರತಿಭಟನೆಗೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಆರೋಪನೇ ಮಾಡಿಲ್ಲ. ಮತಗಳ್ಳತನ ಆಗಿದೆ ಸಾಕ್ಷಿ ಕೊಡುತ್ತೇವೆ ಎಂದು ಹೇಳುತ್ತಾ ಇದ್ದೇವೆ. ಬಿಜೆಪಿಯವರು ಯಾಕೆ ಚುನಾವಣೆ ಆಯೋಗದ ವಕ್ತಾರರ ರೀತಿ ಮಾತನಾಡುತ್ತಾರೆ. ಇಡಿ, ಐಟಿ, ಎಲ್ಲಾ ಸಂಸ್ಥೆಗಳಿಗೂ ಬಿಜೆಪಿ ಅವರು ವಕ್ತಾರರಂತೆ ಆಗಿದ್ದಾರೆ ಎಂದು ಕಿಡಿಕಾರಿದರು.





