ಶ್ರೀನಗರ: ಸುಮಾರು 21 ದಿನಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ರಾತ್ರಿ ಶಾಂತಿಯುತವಾಗಿದ್ದು, ನಿಧಾನವಾಗಿ ಕಣಿವೆ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿರುವುದು ನಾಗರಿಕರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಯಾವುದೇ ಹೊಸ ಘಟನೆಗಳು ಅಥವಾ ಕದನ ವಿರಾಮ ಉಲ್ಲಂಘನೆಗಳು ವರದಿಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಹಲವು ದಿನಗಳಲ್ಲಿ ಮೊದಲ ಬಾರಿಗೆ, ಪೂಂಚ್ ಮತ್ತು ರಜೌರಿ ಸೇರಿದಂತೆ ಜಮ್ಮು ಪ್ರದೇಶದ ಸ್ಥಳೀಯರು ವಿಮಾನ, ಕ್ಷಿಪಣಿ ದಾಳಿ ಮತ್ತು ಡ್ರೋನ್ ಚಟುವಟಿಕೆಗಳಿಂದ ಮುಕ್ತವಾದ ಶಾಂತಿಯುತ ರಾತ್ರಿಯನ್ನು ಆನಂದಿಸಿದ್ದಾರೆ. ಶಾಂತತೆಯಿಂದಾಗಿ ನಿವಾಸಿಗಳು ತಮ್ಮ ಸಾಮಾನ್ಯ ದಿನಚರಿಗೆ ಮರಳಲು ಅವಕಾಶ ಮಾಡಿಕೊಟ್ಟಿತು. ದಾಳಿಯ ಆತಂಕವಿತ್ತಾದರೂ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಬಂದ ಬಳಿಕವೂ ರಾತ್ರಿ ಡ್ರೋನ್ ದಾಳಿ ಪ್ರಯತ್ನಗಳು ನಡೆದಿದ್ದವು. ಆದರೆ ಭಾನುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರ ಶಾಂತಿಯುತ ರಾತ್ರಿಯನ್ನು ಕಂಡಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬತ್ರ್ವಾಲ್ ತಿಳಿಸಿದ್ದಾರೆ.
ಗಡಿ ರಾಜ್ಯಗಳಾದ್ಯಂತದ ನಗರಗಳಲ್ಲಿ ಸಾಮಾನ್ಯತೆಯ ಲಕ್ಷಣಗಳನ್ನು ಕಾಣತೊಡಗಿದೆ. ಭಾನುವಾರ ಮತ್ತು ಸೋಮವಾರಗಳ ನಡುವಿನ ರಾತ್ರಿಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದ ಖಡಕ್ ಎಚ್ಚರಿಕೆ ಬೆನ್ನಲ್ಲೇ ತಡರಾತ್ರಿ ಬಳಿಕ ಕಾಶ್ಮೀರ ಸೇರಿದಂತೆ ಗಡಿಯ 4 ರಾಜ್ಯಗಳಲ್ಲಿ ಎಲ್ಲಿಯೂ ಕದನ ವಿರಾಮ ಉಲ್ಲಂಘಿಸುವ ಗೋಜಿಗೆ ಹೋಗಿಲ್ಲ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.





