ಮೈಸೂರು: ನಗರದ ನರಸಿಂಹರಾಜ ಕ್ಷೇತ್ರದ ಇ-ಖಾತಾ ಅಭಿಯಾನಕ್ಕೆ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಇಂದು(ಏಪ್ರಿಲ್.11) ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸೀಫ್, ಕಂದಾಯ ಹಾಗೂ ಉಪ ಕಂದಾಯ ಅಧಿಕಾರಿಗಳು, ಆಸ್ತಿ ಮಾಲೀಕರು ಭಾಗಿಯಾಗಿದ್ದು, ಆಸ್ತಿ ಮಾಲೀಕರಿಗೆ ಶಾಸಕ ತನ್ವಿರ್ ಸೇಠ್ ಇ-ಖಾತಾ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ತನ್ವಿರ್ ಸೇಠ್ ಅವರು, ಇ -ಖಾತಾ ಮಾಡುವುದರಿಂದ ಯಾರು ಸಹ ದಾಖಲೆಗಳನ್ನು ನಕಲು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರು ಇ -ಖಾತೆ ಮಾಡಿಸಿಕೊಳ್ಳಬೇಕು.
ಇ – ಖಾತೆ ಮಾಡಿಸಿಕೊಳ್ಳುವುದರಿಂದ ಯಾವುದೇ ರೀತಿಯ ದಾಖಲಾತಿ ದುರ್ಬಳಕೆ ಉಂಟಾಗುವುದಿಲ್ಲ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜನರಿಗೆ ಸಹಕಾರಿಯಾಗಲೆಂದು ಇ -ಖಾತಾ ಮಾಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
ತಮ್ಮ ತಮ್ಮ ಅಸ್ತಿಗಳಿಗೆ ತೆರಿಗೆ ನೀಡುವ ಜನರಿಗೆ ಮೂಲ ಸೌಕರ್ಯವನ್ನು ಪಾಲಿಕೆ ಒದಗಿಸಬೇಕು.
ಕಂದಾಯ ಅಧಿಕಾರಿಗಳು ಅಸ್ತಿ ತೆರಿಗೆ ಸಂಗ್ರಹಿಸುವಾಗ ಅವರು ಇ -ಖಾತೆ ಮಾಡಿಸಿದ್ದಾರಾ ಎಂದು ಪರಿಶೀಲಿಸಬೇಕು, ಯಾರು ಇ-ಖಾತೆಗಳನ್ನು ಮಾಡಿಸಿಕೊಂಡಿಲ್ಲವೋ ಅಂತಹವರಿಗೆ ಇ-ಖಾತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕೆಲವು ಲೋಪದೋಷ ಇರುವ ಆಸ್ತಿಗಳಿಗೆ ಖಾತಾ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈಗಲೂ ಕಾಲ ಮಿಂಚಿಲ್ಲ ಸರಿಯಾದ ದಾಖಲೆ ನೀಡಿ ಇ – ಖಾತೆಯನ್ನು ಸಾರ್ವಜನಿಕರು ಮಾಡಿಸಿಕೊಳ್ಳಬೇಕು.
ಎನ್. ಆರ್. ಕ್ಷೇತ್ರದಲ್ಲಿ ತೆರಿಗೆ ಸಂಗ್ರಹ ಕಡಿಮೆ ಇದೆ, ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ತೆರಿಗೆ ಕಟ್ಟುವವರಿಗೆ ನೀರು, ಯುಜಿಡಿ ಹಾಗೂ ಇತರೆ ಮೂಲ ಸೌಕರ್ಯವನ್ನು ಸೂಕ್ತವಾಗಿ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಶಾಸಕ ತನ್ವಿರ್ ಸೇಠ್ ಅಧಿಕಾರಿಗಳಿಗೆ ಸೂಚನೆ ನೀಡಿದರು.





