ಕೊಡಗು ಜಿಲ್ಲಾ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಕೋಟ್ಯಾಂತರ ರೂ. ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ
- ನವೀನ್ ಡಿಸೌಜಾ
ಮಡಿಕೇರಿ: ಕೇರಳ ರಾಜ್ಯದಿಂದ ಅಕ್ರಮವಾಗಿ ಅಂದಾಜು 10 ಕೋಟಿ ರೂ. ಮೌಲ್ಯದ ಸುಮಾರು 10 ಕೆ.ಜಿ ತಿಮಿಂಗಲದ ವಾಂತಿ ಎಂದು ಕರೆಯಲಾಗುವ ಅಂಬರ್ ಗ್ರೀಸ್ ಅನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯ ತಿರುವನಂತಪುರಂನ ಶಂಶುದ್ದೀನ್ ಎಸ್(45), ಎಂ.ನವಾಜ್(54), ಕಣ್ಣೂರು ಜಿಲ್ಲೆಯ ವಿ.ಕೆ. ಲತೀಶ್(53) ರಿಜೇಶ್ ವಿ.(40), ಪ್ರಶಾಂತ್ ಟಿ.(52), ಜೋಬಿಸ್.ಕೆ.ಕೆ.(33), ಜಿಜೇಸ್.ಎಂ.(40), ಕ್ಯಾಲಿಕಟ್ನ ಸಾಜುಥಾಮೋಸ್(58), ಕಾಸರಗೋಡುವಿನ ಬಾಲಚಂದ್ರನಾಯಕ್(55), ಶಿವಮೊಗ್ಗ ಜಿಲ್ಲೆ ಭದ್ರವತಿಯ ರಾಘವೇಂದ್ರ ಎ.ವಿ.(45) ಬಂಧಿತ ಆರೋಪಿಗಳು.
ಕೇರಳ ನೋಂದಣಿ ಸಂಖ್ಯೆಯ ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳನ್ನು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ 10 ಕೆ.ಜಿ 390 ಅಂರ್ಬಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ವಾಹನದೊಂದಿಗೆ ಅಂಬರ್ಗ್ರೀಸ್ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 2(32) 2(36), 39(ಬಿ)(ಡಿ), 44, 48(ಎ), 49(ಎ), 49(ಬಿ),50, 51ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಂಧಿತರಿಂದ ಅಂದಾಜು ರೂ. 10 ಕೋಟಿ ಮೌಲ್ಯದ 10 ಕೆ.ಜಿ390 ಗ್ರಾಂ ಅಂಬರ್ಗ್ರೀಸ್ (ತಿಮಿಂಗಲದ ವಾಂತಿ), ಕೆ.ಎಲ್-79 ಎ-0011 ಇನ್ನೋವಾ ಕ್ರಿಸ್ಟ ವಾಹನ, ಕೆ.ಎಲ್-13 ಎಎಕ್ಸ್-5197 ಸಂಖ್ಯೆಯ ಮಾರುತಿ ಸ್ವಿಫ್ಟ್, 2 ನೋಟು ಎಣಿಸುವ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.





