ಮೈಸೂರು: ಕನ್ನಡ ಪರ ಸಂಘಟನೆಗಳಿಂದ ಎಂಇಎಸ್ ನಿಷೇಧಿಸುವಂತೆ ನಾಳೆ ಕರ್ನಾಟಕ ಬಂದ್ ಆಚರಣೆಗೆ ಖಾಸಗಿ ಬಸ್ ಚಾಲಕರು ಮತ್ತು ಆಟೋ ಚಾಲಕರು ನೈತಿಕ ಬೆಂಬಲ ಸೂಚಿಸಿದ್ದಾರೆ.
ನಗರದಲ್ಲಿ ಇಂದು(ಮಾರ್ಚ್.21) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆಟೋ ಚಾಲಕರು, ನಾಡಿಗಾಗಿ ಒಂದು ದಿನದ ಕೂಲಿ ಬಿಡಲು ಸಿದ್ಧರಿದ್ದೇವೆ. ಮಹಾರಾಷ್ಟ್ರದಲ್ಲಿ ನಮ್ಮ ಬಸ್ ಚಾಲಕನಿಗೆ ಹೊಡೆದಿರುವುದು ಅನ್ಯಾಯ. ನಾಳೆ ನಮಗೂ ಅದೇ ಪರಿಸ್ಥಿತಿ ಬರಬಹುದು. ಆದ್ದರಿಂದ ನಾಡಿಗಾಗಿ ನಾವು ಕನ್ನಡ ಪರ ಹೋರಾಟಕ್ಕೆ ಸಾಥ್ ನೀಡುತ್ತೇವೆ. ಒಂದು ದಿನದ ಕೂಲಿಗಾಗಿ ಗೌರವ ಕಳೆದುಕೊಳ್ಳಬಾರದು.
ನಮಗಾಗಿ ಹಾಗೂ ನಾಡಿಗಾಗಿ ಒಂದು ದಿನ ಕೆಲಸ ಮಾಡದಿದ್ದರೆ ಏನು ಸಮಸ್ಯೆ ಆಗೋದಿಲ್ಲ ಎಂದು ಹೇಳಿದ್ದಾರೆ.
ನಾಳಿನ ಬಂದ್ಗೆ ಖಾಸಗಿ ಬಸ್ ಚಾಲಕರು
ನಾಳಿನ ಕರ್ನಾಟಕ ಬಂದ್ ಬಗ್ಗೆ ಖಾಸಗಿ ಬಸ್ ಚಾಲಕ ಸಂಘದ ಕಾರ್ಯದರ್ಶಿ ದಯಾನಂದಸ್ವಾಮಿ ಮಾತನಾಡಿ, ಖಾಸಗಿ ಬಸ್ ಮಾಲೀಕರ ಸಂಘದಿಂದ ನೈತಿಕ ಕೇವಲ ಬೆಂಬಲವಿರುತ್ತದೆ. ಆದರೆ ಎಂದಿನಂತೆ ಖಾಸಗಿ ಬಸ್ ಸಂಚಾರ ಇರುತ್ತೆ. ಈಗಾಗಲೇ ಫ್ರೀ ಸ್ಕೀಂ ನಿಂದ ಖಾಸಗಿ ಸಾರಿಗೆ ಬಸ್ ಉದ್ಯಮ ಬಹಳ ಸಂಕಷ್ಟದಲ್ಲಿದೆ. ಅಲ್ಲದೇ ಒಂದು ಬಸ್ ನಿಲ್ಲಿಸಿದರೆ ನಮ್ಮ ನೌಕರರ ಜೀವನಕ್ಕೆ ತೊಂದರೆ ಆಗುತ್ತದೆ ಎಂದರು.
ಇನ್ನು ನಾಡು ನುಡಿ ಜಲ ವಿಚಾರಕ್ಕೆ ನಾವು ಬದ್ದರಿದ್ದೇವೆ. ಸಂಘಟನೆಯ ಪ್ರಮುಖರು ಪ್ರತಿಭಟನೆಯಲ್ಲೂ ಭಾಗಿಯುತ್ತೇವೆ. ಆದರೆ ಬಸ್ ನಿಲ್ಲಿಸಿ ನೌಕರರಿಗೆ ತೊಂದರೆ ನೀಡಲ್ಲ ಎಂದು ತಿಳಿಸಿದರು.





