ಮೈಸೂರು: ಇಲ್ಲಿನ ಜೈಲಿನಲ್ಲಿ ಎಸೆನ್ಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಕೈದಿ ರಮೇಶ್ ಎಂಬುವವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಮೈಸೂರಿನ ಕಾರಾಗೃಹದಲ್ಲಿ ಹೊಸ ವರ್ಷದ ಹಿನ್ನೆಲೆ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ಅನ್ನು ಕಿಕ್ಗಾಗಿ ಕುಡಿದಿದ್ದ ಮೈಸೂರಿನ ಮಾದೇಶ್, ಚಾಮರಾಜನಗರದ ನಾಗರಾಜು ಹಾಗೂ ರಮೇಶ್ ಎಂಬುವವರು ಅಸ್ವಸ್ಥರಾಗಿದ್ದರು. ಹೀಗಾಗಿ ಈ ಮೂವರು ಕೈದಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ.
ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹೊಸ ವರ್ಷದ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಅನ್ನು ಡಿಸೆಂಬರ್.28ರಂದೇ ಕುಡಿದು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಬಳಿಕ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಈ ಮೂವರು ಕೈದಿಗಳು ವಿಚಾರವನ್ನು ಮುಚ್ಚಿಟ್ಟಿದ್ದು, ವೈದ್ಯರು ಪ್ರಶ್ನಿಸಿದಾಗ ಸತ್ಯವನ್ನು ಹೇಳಿದ್ದರು.
ಆದಾಗ್ಯೂ ಸಾಕಷ್ಟು ವಿಳಂಬವಾದ ಹಿನ್ನೆಲೆಯಲ್ಲಿ, ಚಿಕಿತ್ಸೆ ಫಲಕಾರಿಯಾಗದೇ ಮಾದೇಶ್ ಹಾಗೂ ನಾಗರಾಜು ಎಂಬುವವರು ಮೃತಪಟ್ಟಿದ್ದರು. ಆದರೆ ಇದೀಗ ರಮೇಶ್ ಎಂಬುವವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಪ್ರಕರಣ ಸದ್ಯ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮೃತಪಟ್ಟ ಕೈದಿ ನಾಗರಾಜು ಅಣ್ಣನ ಮಗ ಮಲ್ಲು ಪ್ರತಿಕ್ರಿಯೆ ನೀಡಿ, 2024ರ ಡಿಸೆಂಬರ್ 26ರಂದು ನಮ್ಮ ಚಿಕ್ಕಪ್ಪನಿಗೆ ಕಿಡ್ನಿ ಫೇಲ್ಯೂರ್ ಆಗಿದೆ ಎಂದು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ನಾನು ನಮ್ಮ ಚಿಕ್ಕಪ್ಪನನ್ನು ಕೇಳಿದೆ. ಆ ವೇಳೆ ನಮ್ಮ ಚಿಕ್ಕಪ್ಪ ಕ್ರಿಸ್ಮಸ್ಗೆ ತಯಾರಿಸಿದ್ದ ಕೇಕ್ ತಿಂದು, ಬಿಸಿಬೇಳೆ ಬಾತ್ ತಿಂದಿದ್ದೆ ತಿಳಿಸಿದ್ದರು. ಅವರು ಕೇಕ್ ಹಾಗೂ ಬಿಸಿಬೇಳೆ ಬಾತ್ ತಿಂದ ನಂತರವೇ ಈ ಹೊಟ್ಟೆ ನೋವು ಬಂದಿದೆ. ಬಳಿಕ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.