Mysore
20
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಮೈಸೂರು-ಕೇರಳ ನಡುವೆ ಶೀಘ್ರವೆ ವಿಮಾನಯಾನ ಸೇವೆ

ಮೈಸೂರು: ಮೈಸೂರು-ಕೇರಳ ನಡುವೆ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ಏರ್ ಕೇರಳ ಸಂಸ್ಥೆ ವಿಮಾನಯಾನ ಸೇವೆಯನ್ನು ಶೀಘ್ರವೆ ಆರಂಭಿಸಲಿದೆ.

ಶುಕ್ರವಾರ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಏರ್ ಕೇರಳ ತಂಡ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಮೇ ಅಥವಾ ಜೂನ್ ತಿಂಗಳಲ್ಲಿ ವಿಮಾನ ಯಾನ ಸೇವೆ ಆರಂಭಿಸುವ ತೀರ್ಮಾನಕ್ಕೆ ಬರಲಾಯಿತು.

ಏರ್ ಕೇರಳ ಅಧ್ಯಕ್ಷ ಅಫಿ ಅಹಮ್ಮದ್ ಮಾತನಾಡಿ, ಮೇ, ಜೂನ್ ತಿಂಗಳಲ್ಲಿ ಮೂರು ಹಾಗೂ ನಂತರದ ಹಂತದಲ್ಲಿ ಮೂರು ಏರ್ ಕ್ರಾ-ಗಳನ್ನು ಖರೀದಿಸಲಾಗುವುದು. ಕೇರಳದ ಯಾವ ನಿಲ್ದಾಣದದಿಂದ ಮೈಸೂರಿಗೆ ವಿಮಾನಯಾನ ಸೇವೆ ಆರಂಭಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.

ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಏರ್ ಕೇರಳ ಸಂಸ್ಥೆಯ ವಿಮಾನಯಾನ ಸೇವೆಯ ಆರಂಭಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಸೇವೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮತ್ತು ದೇಶದ ಎಲ್ಲ ಪ್ರದೇಶಗಳಿಗೆ ವಾಯು ಯಾನ ಸಂಪರ್ಕವನ್ನು ಸುಧಾರಿಸುವ ದೃಷ್ಟಿಕೋನವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಗರಿಕ ವಿಮಾನ ಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಧನ್ಯವಾದ ಹೇಳಿದರು.

ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ವರ್ಷ ಪೂರ್ತಿ ಇಲ್ಲಿಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಮೈಸೂರಿನ ದೇವಾಲಯಗಳು ಹಾಗೂ ಇನ್ನಿತರ ಧಾರ್ಮಿಕ ಕೇಂದ್ರಗಳ ವೀಕ್ಷಣೆಗೆ ಆಗಮಿಸುತ್ತಾರೆ. ಇಲ್ಲಿನ ಸಾಂಸ್ಕೃತಿಕ ಪರಂಪರೆ, ಇತಿಹಾಸ, ಯೋಗ, ಆರೋಗ್ಯ ಕೇಂದ್ರ, ಅರಮನೆ, ದಸರಾ ಮಹೋತ್ಸವದಂತಹ ಉತ್ಸವಗಳು ನಡೆಯುವುದು, ಬಂಡೀಪುರ, ನಾಗರಹೊಳೆ ಅಭಯಾರಣ್ಯಗಳಿವೆ. ಕೈಗಾರಿಕೋದ್ಯಮ, ಆಮದು, ರಫ್ತು ಚಟುವಟಿಕೆಯೂ ನಡೆಯುತ್ತಿದೆ. ಈ ಎಲ್ಲ ಕ್ಷೇತ್ರಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ನೂತನ ಸೇವೆ ಸಹಾಯಕವಾಗಲಿದೆ ಎಂದರು.

ಏರ್ ಕೇರಳ ಉಪಾಧ್ಯಕ್ಷ ಅಯೂಬ್ ಕಲ್ಲಡ, ಸಿಇಒ ಹರೀಶ್ ಕುಟ್ಟಿ, ಗ್ರೌಂಡ್ ಆಪರೇಷ ಮುಖ್ಯಸ್ಥ ಶಾಮನ್ ಪಟ್ಟವಾತುಕಲ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಆರ್.ಅನೂಪ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕೈಗಾರಿಕೆ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಸ್ಕಾಲ್ ಅಧ್ಯಕ್ಷ ಜಯಕುಮಾರ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಪ್ರತಿನಿಽಗಳು ಸಭೆಯಲ್ಲಿ ಭಾಗವಹಿಸಿದ್ದರು.

 

Tags:
error: Content is protected !!