Mysore
34
clear sky

Social Media

ಗುರುವಾರ, 24 ಏಪ್ರಿಲ 2025
Light
Dark

ನೀತಿ ಸಂಹಿತೆ ಉಲ್ಲಂಘನೆ; ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಿಗೆ ನವೆಂಬರ್‌ 13ರಂದು ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿದೆ ಎಂದು ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ನೀಡಿದೆ

ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಕಾಂಗ್ರೆಸ್‌ ಈ ಮೂರು ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಪ್ರಕಟವಾಗುವ ಹಲವಾರು ಕನ್ನಡ, ಇಂಗ್ಲಿಷ್‌ ದಿನಪತ್ರಿಕೆಗಳಲ್ಲಿ ʼನುಡಿದಂತೆ ನಡೆದಿದ್ದೇವೆʼ ಎಂಬ ಶೀರ್ಷಿಕೆ ಅಡಿಯಲ್ಲಿ ಜಾಹೀರಾತು ಪ್ರಕಟಿಸಿದೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.

ಜಾಹೀರಾತಿನಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಫೋಟೊಗಳನ್ನು ಬಳಸಲಾಗಿದ್ದು, ಸರ್ಕಾರದ ಸಾಧನೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಸರ್ಕಾರವೇ ಖರ್ಚು ಮಾಡಿದೆ. ಅಕ್ಟೋಬರ್‌ 15ರಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಈ ಜಾಹೀರಾತು ಅಕ್ಟೋಬರ್‌ 17ರಂದು ಪ್ರಕಟವಾಗಿದೆ ಎಂದೂ ಸಹ ಹೇಳಿದೆ.

ಜನರ ದುಡ್ಡಿನಲ್ಲಿ ಜಾಹೀರಾತು ಪ್ರಕಟಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಪಕ್ಷದ ವಿರುದ್ಧ ನೋಟಿಸ್‌ ಜಾರಿ ಮಾಡಬೇಕು ಅಲ್ಲದೇ ಜನರನ್ನು ತಪ್ಪುದಾರಿಗೆಳೆಯುವ ಇಂತಹ ಜಾಹೀರಾತುಗಳನ್ನು ಮತ್ತೊಮ್ಮೆ ಪ್ರಕಟಿಸದಂತೆ ನಿರ್ಬಂಧ ಹೇರಬೇಕು. ನೀತಿ ಸಂಹಿತೆ ಉಲ್ಲಂಘನೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದೆ.

Tags: