Mysore
21
broken clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ಕಲರ್ಸ್ ಕನ್ನಡಕ್ಕೆ ವಿಜಯ್‍ ಸೂರ್ಯ; ನಿರ್ದೇಶನಕ್ಕೆ ರಕ್ಷ್ ರಾಮ್‍

ಸ್ಟಾರ್‍ ಸುವರ್ಣದಲ್ಲಿ ಪ್ರಸಾರವಾದ ‘ನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ನಟಿಸಿದ್ದ ವಿಜಯ್‍ ಸೂರ್ಯ, ಇದೀಗ ಿನ್ನೊಂದು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಆ ಧಾರಾವಾಹಿ ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ ಆರೂವರೆಗೆ ಕಲರ್ಸ ಕನ್ನಡದಲ್ಲಿ ಪ್ರಸಾರವಾಗಲಿದೆ. ಅದೇ ‘ದೃಷ್ಟಿಬೊಟ್ಟು’.

ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್‍ಲಿ ‘ಅಗ್ನಿ ಸಾಕ್ಷಿ’ ಎಂಬ ಹಿಟ್‍ ಧಾರಾವಾಹಿಯಲ್ಲಿ ನಟಿಸಿದ್ದ ವಿಜಯ್‍ ಸೂರ್ಯ, ಆ ನಂತರ ಬೇರೆ ಚಾನಲ್‍ಗಳ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದರು. ಈಗ ಬಹಳ ದಿನಗಳ ನಂತರ ಅವರು ಕಲರ್ಸ್ ಕನ್ನಡಕ್ಕೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ‘ದೃಷ್ಟಿಬೊಟ್ಟು’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದು, ಈ ಧಾರಾವಾಹಿಯನ್ನು ಮತ್ತೊಮ್ಮ ನಟ ರಕ್ಷ್ ರಾಮ್‍ ನಿರ್ಮಿಸುವುದರ ಜೊತಗೆ ಕ್ರಿಯೇಟಿವ್‍ ಡೈರೆಕ್ಟರ್‍ ಆಗಿ ಕೆಲಸ ಮಾಡುತ್ತಿದ್ದಾರೆ.

ಹೌದು, ‘ಬಹದ್ದೂರ್’ ಚೇತನ್‍ ಕುಮಾರ್‍ ನಿರ್ದೇಶನದ ‘ಬರ್ಮ’ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿರುವ ರಕ್ಷ್, ಅದರ ಜೊತೆಗೆ ಈ ಧಾರಾವಾಹಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅವರ ಪತ್ನಿ ಅನುಷಾ ಶಿವಪ್ರಸಾದ್‍, ಶ್ರೀ ಸಾಯಿ ಆಂಜನೇಯ ಕಂಪನಿ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಕುಮಾರ್‍ ಕೆರೆಗೋಡು ನಿರ್ದೇಶನ ಮಾಡುತ್ತಿದ್ದಾರೆ.

ಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಕಥೆಯೇ ಈ ‘ದೃಷ್ಟಿಬೊಟ್ಟು’. ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ. ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ದುರುಳ ಪೋಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ, ದತ್ತನ ಪ್ರವೇಶವಾಗುತ್ತದೆ. ಆಮೇಲೆ ಏನಾಗುತ್ತದೆ ಎಂದು ಗೊತ್ತಾಗಬೇಕಿದ್ದರೆ ‘ದೃಷ್ಟಿಬೊಟ್ಟು’ ನೋಡಬೇಕು.

‘ದೃಷ್ಟಿಬೊಟ್ಟು’ ಧಾರಾವಾಹಿಯಲ್ಲಿ ವಿಜಯ್‍ ಲಲಿತಾ ಸೂರ್ಯ ಜೊತೆಗೆ ಅರ್ಪಿತಾ ಮೋಹಿತೆ, ದೀಪಶ್ರೀ ಹರೀಶ್‍, ಅಶೋಕ್‍ ಹೆಗ್ಡೆ, ರಾಘು ಶಿವಮೊಗ್ಗ, ತನ್ಮಯ ಕಶ್ಯಪ್‍ ಮುಂತಾದವರು ನಟಿಸುತ್ತಿದ್ದಾರೆ. ಹಿರಿಯ ನಟಿ ಅಂಬಿಕಾ ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದಾರೆ.

Tags:
error: Content is protected !!